ಹುಬ್ಬಳ್ಳಿ: ಸಾರಿಗೆ ನೌಕರರ ಮುಷ್ಕರದ ಅವಧಿಯಲ್ಲಿ ಮಾರ್ಗದಲ್ಲಿ ಸಂಚರಿಸುತ್ತಿದ್ದ ಸಾರಿಗೆ ಬಸ್ ತಡೆದು ಕರ್ತವ್ಯ ನಿರತ ಚಾಲಕ- ನಿರ್ವಾಹಕರಿಗೆ ಅವಮಾನಿಸಿ ಅವರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಸಿಬ್ಬಂದಿಗಳನ್ನು ಅಮಾನತುಗೊಳಿಸಿ ವಾಕರಸಾ ಸಂಸ್ಥೆಯ ಹುಬ್ಬಳ್ಳಿ ಗ್ರಾಮಾಂತರ ವಿಭಾಗದ ವಿಭಾಗೀಯ ಎಚ್. ರಾಮನಗೌಡರ ಆದೇಶ ಹೊರಡಿಸಿದ್ದಾರೆ.
ಹುಬ್ಬಳ್ಳಿ ಗ್ರಾಮಾಂತರ 1ನೇ ಘಟಕದಲ್ಲಿ ಚಾಲಕ ಕಂ, ನಿರ್ವಾಹರಾದ ಶಿವಪ್ಪ ಡಿ.ದ್ಯಾಮಣ್ಣ, ಮಂಜುನಾಥ್ ಐ.ಮಡಿವಾಳ ಮತ್ತು ನಿನಾಯಕ ವೈ. ಕಲ್ಲಪ್ಪ ಅಮಾನತುಗೊಂಡಿರುವ ಸಿಬ್ಬಂದಿ. ಸದರಿ ಪ್ರಕರಣದಲ್ಲಿ ಭಾಗಿಯಾಗಿರುವ ಇನ್ನಿಬ್ಬರ ಪೈಕಿ ಚಾಲಕ ಎಂ.ಕೆ. ಮದ್ನೂರ ಮತ್ತೊಂದು ಪ್ರಕರಣದಲ್ಲಿ ಈಗಾಗಲೇ ಅಮಾನತುಗೊಂಡಿದ್ದಾರೆ ಹಾಗೂ ಇನ್ನೋರ್ವ ಚಾಲಕ ನಾಗರಾಜ್.ಎಂ. ಭೂಮಣ್ಣ ಅವರನ್ನು ಈಗಾಗಲೇ ಚಿಕ್ಕೋಡಿ ವಿಭಾಗಕ್ಕೆ ವರ್ಗಾಯಿಸಿ ಆದೇಶಿಸಲಾಗಿದೆ.
ಈ ಐದೂ ಜನ ಸಿಬ್ಬಂದಿ ಏಪ್ರಿಲ್ 14ರ ಬುಧವಾರ ಸಂಜೆ 4.25 ರ ಸಮಯದಲ್ಲಿ ಧಾರವಾಡದಿಂದ ಹುಬ್ಬಳ್ಳಿಗೆ ಬರುತ್ತಿದ್ದ ಕೆ.ಎ. 25 ಎಫ್ 2670 ನೋಂದಣಿ ಸಂಖ್ಯೆಯ ಬಸ್ಸನ್ನು ಉಣಕಲ್ ಕೆರೆ ಹತ್ತಿರ ಶ್ರೀನಗರ ಕ್ರಾಸ್ ನಲ್ಲಿ ತಡೆದು ನಿಲ್ಲಿಸಿ ಕರ್ತವ್ಯದ ಮೇಲಿದ್ದ ಚಾಲಕ ಎಸ್.ಬಿ. ಹಿರೇಮಠ ಮತ್ತು ನಿರ್ವಾಹಕ ಎಚ್.ಜಿ.ಶಲವಡಿ ಅವರಿಗೆ ಹೂವಿನ ಮಾಲೆ ಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕರ್ತವ್ಯಕ್ಕೆ ಹಾಜರಾಗಬಾರದೆಂದು ಬೆದರಿಕೆ ಹಾಕಿ ಅವರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದರು. ಘಟನೆಗೆ ಸಂಬಂಧಿಸಿದಂತೆ ಈ ಐವರ ವಿರುದ್ಧ ವಿದ್ಯಾನಗರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇದೀಗ ಮೂವರು ಅಮಾನತು ಶಿಕ್ಷೆಗೆ ಗುರಿಯಾಗಿದ್ದಾರೆ.