ಲಕ್ನೋ: ಮಕ್ಕಳಿಲ್ಲದ ದಂಪತಿ ಬೇರೆಯವರ ಮಗುವನ್ನು ದತ್ತು ಪಡೆದು ಸಾಕುವುದನ್ನು ನೊಡಿದ್ದೇವೆ. ಆದರೆ ಇಲ್ಲೊಂದು ಜೋಡಿ ಮಕ್ಕಳಿಲ್ಲದ ಕೊರಗನ್ನು ನೀಗಿಸಲು ಕರುವನ್ನು ದತ್ತು ಪಡೆದಿದ್ದು, ಮಕ್ಕಳಂತೆ ಜೋಪಾನ ಮಾಡುತ್ತಿದ್ದಾರೆ.
ಉತ್ತರ ಪ್ರದೇಶದ ಶಹಜಾನ್ಪುರದ ರೈತರಾದ ವಿಜಯ್ಪಾಲ್ ಹಾಗೂ ಇವರ ಪತ್ನಿ ರಾಜೇಶ್ವರಿ ದೇವಿ ದಂಪತಿ ವಿವಾಹವಾಗಿ 15 ವರ್ಷಗಳು ಕಳೆದಿದ್ದು, ಮಕ್ಕಳಾಗಿಲ್ಲ. ಈ ಕೊರಗನ್ನು ನೀಗಿಸಲು ಅವರು ಕರು ದತ್ತು ಪಡೆದಿದ್ದಾರೆ. ಇದಕ್ಕೆ ಲಲ್ತು ಬಾಬಾ ಎಂದು ನಾಮಕರಣ ಮಾಡಿದ್ದಾರೆ. ವಿಜಯ್ಪಾಲ್ ಅವರ ತಂದೆ ಒಂದು ಹಸುವನ್ನು ತಂದಿದ್ದರು. ಅವರೇ ಹಸು ನೋಡಿಕೊಳ್ಳುತ್ತಿದ್ದರು. ಹಸು ಕರುವಿಗೆ ಜನ್ಮ ನೀಡಿದೆ. ಆದರೆ ಕೆಲ ದಿನಗಳಲ್ಲೇ ವಿಜಯ್ ಪಾಲ್ ಅವರ ತಂದೆ ಸಾವನ್ನಪ್ಪಿದರು. ಬಳಿಕ ಹಸು ಸಹ ಸಾವನ್ನಪ್ಪಿತು. ಆಗ ಕರು ಮಾತ್ರ ಉಳಿಯಿತು.
ವಿಜಯ್ಪಾಲ್ ಹಾಗೂ ಪತ್ನಿ ರಾಜೇಶ್ವರಿ ಅವರು ತಮ್ಮ ಕುಟುಂಬ ಪೂರ್ಣವಾಗಬೇಕಾದರೆ ಕರು ಇರಲೇಬೇಕೆಂದು ದತ್ತು ಪಡೆದರು. ಮಾತ್ರವಲ್ಲದೆ ಕರುವಿಗೆ ಅದ್ಧೂರಿಯಾಗಿ ಕೇಶಮುಂಡನ ಸಹ ಮಾಡಿದ್ದಾರೆ. ಹಿಂದೂ ಸಂಪ್ರದಾಯದಂತೆ ಎಲ್ಲ ಪದ್ಧತಿ ಅನುಸರಿಸಿ ಕೇಶಮುಂಡನ ಮಾಡಿದ್ದಾರೆ. ಇದನ್ನು ಕಂಡ ಸ್ಥಳೀಯರು ತುಂಬಾ ಸಂತಸಗೊಂಡಿದ್ದಾರೆ.
ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಸೇರಿ ಸುಮಾರು 500 ಜನರ ಸಮ್ಮುಖದಲ್ಲಿ ಬುಧವಾರ ಅದ್ಧೂರಿಯಾಗಿ ಕೇಶಮುಂಡನ ಮಾಡಿದ್ದಾರೆ. ಕರು ಜನಿಸಿದಾಗಿನಿಂದ ನಮಗೆ ತುಂಬಾ ಹತ್ತಿರವೆನಿಸಿದೆ. ಹೀಗಾಗಿ ಲಲ್ತುನನ್ನು ನಮ್ಮ ಮಗನಂತೆ ಕಾಣುತ್ತೇವೆ. ಹಸುವನ್ನು ನಾವು ತಾಯಿಯಾಗಿ ಸ್ವೀಕರಿಸುವುದಾದರೆ, ಕರುವನ್ನು ಮಗನಂತೆ ಯಾಕೆ ಕಾಣಬಾರದು ಎಂದು ವಿಜಯ್ ಪಾಲ್ ತಿಳಿಸಿದ್ದಾರೆ.
ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಉತ್ತರ ಪ್ರದೇಶ ಸರ್ಕಾರ ‘ನಿರಾಶ್ರಿತ್/ಬೆಸಹರಾ ಗೋವಂಶ ಸಹಭಾಗಿತಾ ಯೋಜನೆ’ ಜಾರಿಗೆ ತಂದಿದೆ. ಈ ಯೋಜನೆಯಡಿ ಹಸು ದತ್ತು ಪಡೆಯುವರಿಗೆ ಅದರ ನಿರ್ವಹಣೆಗಾಗಿ ಪ್ರತಿ ದಿನ 30 ರೂ.ನೀಡುತ್ತದೆ. ಉತ್ತರ ಪ್ರದೇಶದ ಸೆಮಿ ಅರ್ಬನ್ ಹಾಗೂ ಗ್ರಾಮೀಣ ಭಾಗಗಳಲ್ಲಿ ಜನರು ಬೀದಿ ದನಗಳನ್ನು ದತ್ತು ಪಡೆಯಬಹುದು. ಪ್ರತಿ ಕಟುಂಬದವರು ನಾಲ್ಕು ದನಗಳನ್ನು ಸಾಕಬಹುದಾಗಿದೆ. ಇವರಿಗೆ ದಿನಕ್ಕೆ 30ರೂ. ನಿರ್ವಹಣಾ ವೆಚ್ಚವನ್ನು ಸರ್ಕಾರ ನೀಡಲಿದೆ.