– ವಿವಾದಕ್ಕೆ ಸಿಲುಕಿದ ಮಾಡೆಲ್ ಬೃಂದಾ ಅರಸ್
ಮಂಗಳೂರು: ಬೆಂಗಳೂರಿನ ಇಬ್ಬರು ಮಾಡೆಲ್ ಗಳು ಕರಾವಳಿಯ ಪುಣ್ಯಕ್ಷೇತ್ರದ ಬಳಿ ಇರುವ ದೇವರ ಜಲಪಾತದ ಎದುರು ಅರೆಬೆತ್ತಲೆಯಾಗಿ ಫೋಟೋ ಶೂಟ್ ಮಾಡಿದ್ದು, ಇದೀಗ ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ತೊಡಿಕಾನ ಗ್ರಾಮದಲ್ಲಿ 13 ಶತಮಾನದ ಇತಿಹಾಸವಿರುವ ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನವಿದೆ. ಇಲ್ಲಿ ನೆಲೆಸಿರೋ ಪರಮಾತ್ಮ ಇಲ್ಲಿಂದ 2 ಕಿಲೋಮೀಟರ್ ದೂರದಲ್ಲಿರುವ ಈ ಜಲಪಾತದಲ್ಲಿ ಸ್ನಾನ ಮಾಡುತ್ತಿದ್ದ ಎಂಬ ಐತಿಹ್ಯ ಇದೆ. ಹೀಗಾಗಿ ಇದಕ್ಕೆ ದೇವರಗುಂಡಿ ಎಂದು ಜನ ಕರೆಯುತ್ತಾರೆ. ವಿಶೇಷ ದಿನಗಳಲ್ಲಿ ವರ್ಷಕ್ಕೆ ಏಳೆಂಟು ಬಾರಿ ದೇವರಹೊಂಡದಿಂದ ತೀರ್ಥವನ್ನು ದೇವಸ್ಥಾನಕ್ಕೆ ತೆಗೆದುಕೊಂಡು ಹೋಗುತ್ತಾರೆ.
ಈ ಸ್ಥಳದಲ್ಲಿ ಸ್ಥಳಿಯರು ನೀರಿಗೆ ಇಳಿಯುವುದಿಲ್ಲ. ಅಷ್ಟು ಪವಿತ್ರ ಭಾವನೆಯಿಂದ ಇಲ್ಲಿನ ಪರಿಶುದ್ಧತೆಯನ್ನು ಕಾಪಾಡಿಕೊಂಡು ಬಂದಿದ್ದಾರೆ. ಆದರೆ ಬೆಂಗಳೂರಿನ ಮಾಡೆಲ್ ಗಳಾದ ಬೃಂದಾ ಅರಸ್ ಮತ್ತು ಆಕೆಯೊಂದಿಗೆ ಮತ್ತೊಬ್ಬಳು ಮಾಡೆಲ್ ಸೇರಿಕೊಂಡು ಬಿಕಿನಿಯಲ್ಲಿ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ಇದು ಸ್ಥಳೀಯರ ವಿರೋಧಕ್ಕೆ ಕಾರಣವಾಗಿದೆ.
ಬಿಕಿನಿ ಶೂಟಿಂಗ್ ನಡೆದ ಸ್ಥಳದಲ್ಲಿ ಸುತ್ತಾಮುತ್ತ ಮನೆಗಳಿವೆ. ಆದರೂ ಹೀಗೆ ಅರೆಬೆತ್ತಲಾಗಿ ಓಡಾಡಿ ಸ್ಥಳೀಯರಿಗೆ ಮುಜುಗರವನ್ನುಂಟು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಅಲ್ಲದೆ ಇಂದು ಸ್ಥಳೀಯರು ಈ ಬಗ್ಗೆ ದೇವಸ್ಥಾನದ ಆಡಳಿತ ಮಂಡಳಿಗೆ ದೂರು ಕೂಡ ನೀಡಿದ್ದಾರೆ. ಈ ವಿಚಾರ ದೇವಸ್ಥಾನದ ಆಡಳಿತ ಮಂಡಳಿಗೂ ಕೂಡ ಗೊತ್ತಿಲ್ಲವಂತೆ. ಈ ದೇವರ ಗುಂಡಿ ಜಲಪಾತ ಇರುವುದು ದೇವಸ್ಥಾನದಿಂದ 2 ಕಿಲೋಮೀಟರ್ ದೂರದಲ್ಲಿ. ಅಲ್ಲಿ ಶೂಟ್ ಮಾಡುವ ಬಗ್ಗೆ ನಮ್ಮ ಗಮನಕ್ಕೆ ತಂದಿಲ್ಲ ಎಂದು ಆಡಳಿತ ಮಂಡಳಿಯವರು ಹೇಳಿದ್ದಾರೆ.
ಈ ಬಗ್ಗೆ ಆಡಳಿತ ಮಂಡಳಿ ಸುಳ್ಯ ತಹಶಿಲ್ದಾರ್ ಗೆ ಮತ್ತು ಅರಣ್ಯ ಇಲಾಖೆಗೆ ದೂರು ನೀಡುವ ನಿರ್ಧಾರ ಮಾಡಿದೆ. ಹೇಳಿ ಕೇಳಿ ಇದು ಅರಣ್ಯ ಪ್ರದೇಶ. ಹೀಗೆ ನಿರ್ಜನ ಪ್ರದೇಶದಲ್ಲಿ ಎರಡ್ಮೂರು ಜನರು ಅರೆಬೆತ್ತಾಲಾಗಿದ್ದರೆ ಅವರಿಗೂ ಕೂಡ ಅಪಾಯ ಎದುರಾಗುವ ಸಾಧ್ಯತೆ ಇರುತ್ತೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.