ಬೆಳಗಾವಿ: ಕುಂದಾನಗರಿಯಲ್ಲಿ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಗುತ್ತಿದೆ. ಈ ಮೂಲಕ ರಾಜ್ಯೋತ್ಸವ ಆಚರಿಸುವ ಬದಲು ಕರಾಳ ದಿನಾಚರಣೆ ಆಚರಣೆಗೆ ಮುಂದಾದ ಎಂಇಎಸ್ಗೆ ಮೊದಲ ಬಾರಿಗೆ ಮುಖಭಂಗವಾಗಿದೆ.
ಜಿಲ್ಲಾಧಿಕಾರಿ ಎಂಜಿ ಹಿರೇಮಠ ಕರಾಳ ದಿನಾಚರಣೆ ಮಾಡದಂತೆ ಖಡಕ್ ಆದೇಶ ನೀಡಿದ್ದಾರೆ. ಜಿಲ್ಲಾಡಳಿತ ಅನುಮತಿ ನೀಡದ ಹಿನ್ನೆಲೆ ಸರ್ಕಾರದ ವಿರುದ್ಧ ನಾಡದ್ರೋಹಿಗಳು ಪ್ರತಿಭಟನೆಗೆ ಮುಂದಾಗಿದ್ದಾರೆ. ಬೆಳಗ್ಗೆ 10 ಗಂಟೆಗೆ ಶಿವಾಜಿ ಗಾರ್ಡನ್ ಬಳಿ ಪ್ರತಿಭಟನೆಗೆ ಪ್ಲಾನ್ ಮಾಡಲಾಗಿದೆ. ಮನೆಯ ಮಹಡಿ ಮೇಲೆ ನಿಂತು ಕಪ್ಪು ಬಲೂನ್ ಗಳನ್ನ ಹಾರಿ ಬಿಡಲು ಕೆಲ ಪುಂಡರು ಯೋಜನೆ ಹಾಕಿದ್ದಾರೆ. ನಾಡದ್ರೋಹಿಗಳಿಗೆ ಮಹಾರಾಷ್ಟ್ರ ಸರ್ಕಾರ ಕೂಡ ಬೆಂಬಲ ನೀಡುತ್ತಿದೆ.
ಮಹಾರಾಷ್ಟ್ರದಲ್ಲಿ ಸಚಿವರೆಲ್ಲರೂ ಕಪ್ಪು ಪಟ್ಟಿ ಕಟ್ಟಿಕೊಂಡು ಕೆಲಸ ಮಾಡುತ್ತಿದ್ದಾರೆ. ಮಹಾರಾಷ್ಟ್ರ ಸಚಿವರು ಕರ್ನಾಟಕದಲ್ಲಿನ ರಾಜ್ಯೋತ್ಸವಕ್ಕೆ ಬಾಯಿ ಬಡಿದುಕೊಳ್ಳುತ್ತಿದ್ದಾರೆ. ಬೆಳಗಾವಿ ನಗರದಾದ್ಯಂತ ಪೊಲೀಸ್ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ನಗರ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಆಯಾಕಟ್ಟಿನ ಸ್ಥಳಗಳಲ್ಲಿ ಹೆಚ್ಚಿನ ಪೊಲೀಸ್ ಭದ್ರತೆ ಒಡಗಿಸಲಾಗಿದೆ.