ರಾಯ್ಪುರ: ಕಬ್ಬಡ್ಡಿ ಆಟವನ್ನು ಆಡುತ್ತಲೇ ಯುವಕನೋರ್ವ ಪ್ರಾಣ ಕಳೆದುಕೊಂಡಿರುವ ಘಟನೆ ಛತ್ತೀಸ್ಗಢ ಧಾಮ್ತಾರಿ ಜಿಲ್ಲೆಯ ಗೋಜಿಯಲ್ಲಿ ನಡೆದಿದೆ.
ಮೃತ ಯುವಕನನ್ನು ನರೇಂದ್ರ ಸಾಹು (20) ಎಂದು ಗುರುತಿಸಲಾಗಿದೆ. ಈತ ಕೋಕಾಡಿ ಗ್ರಾಮದವನಾಗಿದ್ದು, ಕಬ್ಬಡ್ಡಿ ಆಟವಾಡುತ್ತಲೇ ಸಾವನ್ನಪ್ಪಿದ್ದಾನೆ. ಈ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಜನವರಿ 20ರ ರಾತ್ರಿ ಕಬ್ಬಡ್ಡಿ ಪಂದ್ಯವೊಂದು ನಡೆಯುತ್ತಿತ್ತು. ಈ ವೇಳೆ ರೈಡರ್ ಆಗಿ ಎದುರಾಳಿ ಕೋರ್ಟ್ಗೆ ನರೇಂದ್ರ ಸಾಹು ಆಟವಾಡುತ್ತಿದ್ದನು. ಇದೇ ವೇಳೆ ಅವನನ್ನು ಟ್ಯಾಕಲ್ ಮಾಡಲಾಗಿತ್ತು. ಆಗ ನರೇಂದ್ರ ಮುಗ್ಗರಿಸಿ ಬಿದ್ದಿದ್ದಾನೆ. ಈ ವೇಳೆ ಎದುರಾಳಿ ತಂಡದ ಆಟಗಾರರು ಆತನ ಮೇಲೆರಗಿದ್ದು, ನರೇಂದ್ರ ಪ್ರಜ್ಞೆಯನ್ನು ಕಳೆದುಕೊಂಡಿದ್ದಾನೆ.
ಪ್ರಜ್ಞಾಹೀನನಾಗಿ ಬಿದ್ದಿದ್ದ ನರೇಂದ್ರನನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಯುವಕ ಹೃದಯಾಘಾತದಿಂದ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ. ಮೃತ ಯುವಕನ ಮರಣೋತ್ತರ ಪರೀಕ್ಷೆಯಿಂದ ಸಾವಿಗೆ ನಿಖರವಾದ ಕಾರಣ ತಿಳಿದು ಬರಬೇಕಿದೆ.