-ಸರ್ಕಾರದ ಆದೇಶಕ್ಕೂ ಗಣಿಕುಳಗಳು ಡೋಂಟ್ಕೇರ್
ಗದಗ: ಜಿಲ್ಲೆಯ ಕಪ್ಪತ್ತಗುಡ್ಡ ಅಕ್ಕಪಕ್ಕದಲ್ಲೇ ಸಾಕಷ್ಟು ಕಲ್ಲು ಗಣಿಗಾರಿಕೆ ಕ್ವಾರಿಗಳು ತಲೆ ಎತ್ತಿವೆ. ಕಪ್ಪತ್ತಗುಡ್ಡ ವನ್ಯಜೀವಿ ಧಾಮ ಆದ್ರೂ, ಈ ಪ್ರದೇಶದಲ್ಲಿ ಸಕ್ರಮದ ಹೆಸರಲ್ಲಿ ಅಕ್ರಮ ಕಲ್ಲುಗಣಿಗಾರಿಕೆ ನಡೆಯುತ್ತಿದೆ. ಕಪ್ಪತ್ತಗುಡ್ಡ ವನ್ಯಜೀವಿ ಧಾಮದ 1 ಕಿಲೋ ಮೀಟರ್ ವ್ಯಾಪ್ತಿ 14 ಕಲ್ಲುಗಣಿಗಾರಿಕೆ ಕ್ವಾರಿಗಳನ್ನ ತಕ್ಷಣ ಸ್ಥಗಿತ ಮಾಡುವಂತೆ ಸರ್ಕಾರ ನೋಟಿಸ್ ನೀಡಿದೆ. ಆದರೆ ಇಲ್ಲಿರುವ ಘಟಕಗಳು ಪ್ರಭಾವಿಗಳದ್ದು ಎಂದು ತಿಳಿದು ಬಂದಿದೆ. ಹಾಗಾಗಿ ಜಿಲ್ಲಾಡಳಿತದ ಮೇಲೆ ಒತ್ತಡ ಹಾಕಿ ಎಗ್ಗಿಲದೇ ಗಣಿಗಾರಿಕೆ ನಡೆಸುತ್ತಿದ್ದಾರೆ. ಹಗಲು ರಾತ್ರಿ ಅನ್ನದೇ ಬ್ಲಾಸ್ಟಿಂಗ್ ಮಾಡ್ತಿದ್ದಾರೆ.
ಕಪ್ಪತ್ತಗುಡ್ಡ ವ್ಯಾಪ್ತಿಯ ಎಲ್ಲಾ ಗಣಿ ಘಟಕಗಳಿಗೆ ಜಿಲ್ಲಾಡಳಿತ ನೋಟಿಸ್ ನೀಡಿದೆ. ಇದನ್ನ ನೋಡಿದ ಗಣಿಕುಳಗಳು ಹೌಹಾರಿದ್ದಾರೆ. ಗಣಿ ಇಲಾಖೆಯಿಂದ ಅನುಮತಿ ಪಡೆದ ಕಲ್ಲು ಗಣಿಗಾರಿಕೆ ಕ್ವಾರಿಗಳಿಗೆನೇ ಇದೀಗ ಕಂಟಕ ಎದುರಾಗಿದೆ. ಕ್ವಾರಿಗಳನ್ನು ಉಳಿಸಿಕೊಳ್ಳಲು ಪ್ರಭಾವಿಗಳು ಭಾರೀ ಲಾಬಿ ನಡೆಸಿದ್ದಾರೆ ಎನ್ನುವ ಆರೋಪವೂ ಕೇಳಿಬಂದಿದೆ. ಈ ಬಗ್ಗೆ ಅಧಿಕಾರಿಗಳನ್ನ ಕೇಳಿದರೆ 15 ದಿನ ಗಡವು ನೀಡಿದ್ದೆವೆ ಎಂದು ಹೇಳುತ್ತಾರೆ.
ಸರ್ಕಾರದಿಂದ ಪರವಾನಿಗೆ ಪಡೆದ ಕ್ವಾರಿಗಳು ಇದ್ದರೂ ಕೂಡಾ ಕಾನೂನು ಮೀರಿ ಬ್ಲಾಸ್ಟಿಂಗ್ ಮಾಡಿ ಲೂಟಿ ಮಾಡುತ್ತಿರುವ ಆರೋಪಗಳು ಸಹ ಇವೆ.. ಅದೇನೆ ಇರಲಿ ಎಷ್ಟೇ ಒತ್ತಡ ಹಾಕಿದ್ರು ಯಾವುದಕ್ಕೂ ಮಣಿಯದೆ ಕಪ್ಪತ್ತಗುಡ್ಡ, ಪರಿಸರ ಉಳಿಸಿ ಬೆಳಸಬೇಕು ಎಂಬುದು ಇಲ್ಲಿನ ಜನರ ಆಶಯ.