ಮುಂಬೈ: ಡ್ರಗ್ಸ್ ಪ್ರಕರಣದಲ್ಲಿ ಸಿಲುಕಿ ಜಾಮೀನಿನ ಮೇಲೆ ಹೊರ ಬಂದಿರುವ ಹಾಸ್ಯ ನಟಿ ಭಾರತಿ ಸಿಂಗ್ ಗೆ ವಾಹಿನಿ ಎರಡನೇ ಅವಕಾಶ ನೀಡಬೇಕೆಂದು ನಟ ಕೃಷ್ಣ ಅಭಿಷೇಕ್ ಒತ್ತಾಯಿಸಿದ್ದಾರೆ. ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಕಪಿಲ್ ಶರ್ಮಾ ಶೋನಿಂದ ಹಾಸ್ಯ ಕಲಾವಿದೆ ಭಾರತಿ ಸಿಂಗ್ ಅವರನ್ನ ಕೈ ಬಿಡಲಾಗಿದೆ ಎಂದು ಹೇಳಲಾಗುತ್ತಿದೆ. ಈ ಸಂಬಂಧ ವಾಹಿನಿ ಅಧಿಕೃತ ಹೇಳಿಕೆ ನೀಡಿಲ್ಲ.
ಕಪಿಲ್ ಮತ್ತು ನಾನು ಸದಾ ಭಾರತಿ ಜೊತೆಯಲ್ಲಿ ನಿಲ್ಲುತ್ತೇವೆ. ಯಾರು ಬೇಕಾದ್ರೂ ಏನಾದ್ರೂ ತಿಳಿದುಕೊಳ್ಳಲಿ. ಒಂದು ವೇಳೆ ಭಾರತಿ ಸಿಂಗ್ ಶೋನಿಂದ ಕೈಬಿಡುವ ವಿಚಾರ ಬಂದ್ರೆ ನಾನು ಮತ್ತು ಕಪಿಲ್ ಆಕೆಗೆ ಬೆಂಬಲ ನೀಡುತ್ತೇನೆ. ಆದ್ರೆ ವಾಹಿನಿ ಈ ರೀತಿಯ ನಿರ್ಧಾರ ತೆಗೆದುಕೊಳ್ಳಲ್ಲ ಎಂಬ ವಿಶ್ವಾಸ ನನಗಿದೆ ಎಂದು ಕೃಷ್ಣ ಹೇಳಿದ್ದಾರೆ.
ನವೆಂಬರ್ 21ರಂದು ಬೆಳಗ್ಗೆ ಭಾರತಿ ಸಿಂಗ್ ನಿವಾಸ ಮತ್ತು ಪ್ರೊಡೆಕ್ಷನ್ ಕಚೇರಿಯ ಮೇಲೆ ಎನ್ಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದರು. ದಾಳಿ ವೇಳೆ ಎರಡೂ ಸ್ಥಳಗಳಿಂದ 86.5 ಗ್ರಾಂ ಗಾಂಜಾ ಲಭ್ಯವಾಗಿತ್ತು. ಈ ಹಿನ್ನೆಲೆ ವಿಚಾರಣೆಗಾಗಿ ದಂಪತಿಯನ್ನ ಎನ್ಸಿಬಿ ಕಚೇರಿಗೆ ಕರೆತರಲಾಗಿತ್ತು. 15 ಗಂಟೆ ವಿಚಾರಣೆ ನಡೆಸಿದ ಬಳಿಕ ರಾತ್ರಿ ಇಬ್ಬರನ್ನು ಬಂಧನಕ್ಕೊಳಪಡಿಸಲಾಗಿತ್ತು. ನವೆಂಬರ್ 23ರಂದು ಬಂಧಿತರಾಗಿದ್ದ ಭಾರತಿ ಸಿಂಗ್ ಮತ್ತು ಹರ್ಷ ಲಿಂಬಾಚಿಯಾಗೆ ನ್ಯಾಯಾಲಯ ಷರತ್ತು ಬದ್ಧ ಜಾಮೀನು ನೀಡಿತ್ತು.
ಇದಕ್ಕೂ ಮೊದಲು ಮುಂಬೈನ ಖಾರದಂಡಾ ಇಲಾಖೆಯ 21 ವರ್ಷದ ಯುವಕನ ನಿವಾಸದ ಮೇಲೆ ದಾಳಿ ನಡೆಸಿ ಆತನನ್ನು ಬಂಧಿಸಲಾಗಿತ್ತು. ಯುವಕನಿಂದ 40 ಗ್ರಾಂ ಗಾಂಜಾ ಮತ್ತು ಇನ್ನಿತರ ನಶೆ ಪದಾರ್ಥಗಳನ್ನ ವಶಕ್ಕೆ ಪಡೆದುಕೊಳ್ಳಲಾಗಿತ್ತು. ಇದೇ ಯುವಕ ವಿಚಾರಣೆ ವೇಳೆ ಭಾರತಿ ಸಿಂಗ್ ಹೆಸರು ಹೇಳಿದ್ದ. ಯುವಕನ ಹೇಳಿಕೆಯನ್ನಾಧರಿಸಿ ಅಧಿಕಾರಿಗಳು ಭಾರತಿ ನಿಒವಾಸದ ಮೇಲೆ ದಾಳಿ ನಡೆಸಿದ್ದರು ಎಂದು ವರದಿಯಾಗಿದೆ.