– ಜಮೀರ್ನನ್ನು ಬಂಧಿಸಲು ಹೇಳೋರನ್ನು ಮೊದ್ಲು ಬಂಧಿಸ್ಬೇಕು
ರಾಮನಗರ: ಕನ್ನಡ ಚಿತ್ರರಂಗಕ್ಕೆ ಮಸಿ ಬಳಿಯುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ ಎಂದು ಸಂಸದ ಡಿ.ಕೆ ಸುರೇಶ್ ಗಂಭೀರ ಆರೋಪ ಮಾಡಿದ್ದಾರೆ.
ನಗರದಲ್ಲಿ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಮೀರ್ ಅಹಮದ್ ಅವರನ್ನ ಬಂಧಿಸಬೇಕು ಅಂತ ಹೇಳಿರುವವರನ್ನ ಮೊದಲು ಬಂಧಿಸಬೇಕು. ರಾಜಕಾರಣಕ್ಕೋಸ್ಕರ ಆರೋಪ ಮಾಡಬಾರದು. ಜಮೀರ್ ಅಹಮದ್ ವಿರುದ್ಧ ಮಾತನಾಡಿದ್ರೆ ನಾನು ಲೀಡರ್ ಆಗುತ್ತೇನೆ. ನಾನು ಮುಸ್ಲಿಂ ವಿರೋಧಿ ಅಂತ ತೋರಿಸಿಕೊಳ್ಳುವುದನ್ನ ಬಿಡಬೇಕು. ಇದು ಕೆಟ್ಟ ಅಭ್ಯಾಸ ಇದನ್ನ ಮೊದಲು ಬಿಡಬೇಕು ಎಂದು ಮೈಸೂರು ಸಂಸದ ಪ್ರತಾಪ್ ಸಿಂಹ ಹೆಸರೆಳದೆ ಟಾಂಗ್ ಕೊಟ್ಟರು.
ಇದೇ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟಿಲ್ಗೆ ಟಾಂಗ್ ನೀಡಿದ ಸುರೇಶ್, ಅವರ ಪಕ್ಷದಲ್ಲಿ ನಡೆಯುತ್ತಿರುವ ಅಕ್ರಮ ವ್ಯವಹಾರಗಳನ್ನ ತಡೆಯಲಿ. ನಳೀನ್ ಕುಮಾರ್ ಕಟೀಲ್ ಅವರು ಅವರ ಪಕ್ಷದಲ್ಲಿ ನಡೆಯುತ್ತಿರುವ ಬೇರೆ ಬೇರೆ ದಂಧೆಗಳನ್ನ ಮಾಡುತ್ತಿರುವುದನ್ನ ಪತ್ತೆ ಹಚ್ಚಲಿ. ಕಿಸ್ ಕೊಟ್ಟಿರುವುದು, ಬ್ಲೂ ಪ್ಲಿಂ ನೋಡಿರೋದು. ಯಾರು ಇದರ ಇತಿಹಾಸ, ಯಾರದು ಅಂದ್ರೆ ಅದು ಬಿಜೆಪಿಯವರದ್ದು. ಬಿಜೆಪಿ ಕಲಿಸಿ ಕೊಡತ್ತಿರುವುದು ಬೇರೆ, ಜನಕ್ಕೆ ಹೇಳುತ್ತಿರುವುದೇ ಬೇರೆ, ಅವರ ವ್ಯವಹಾರವೇ ಬೇರೆ. ಈ ಡ್ರಗ್ಸ್ ದಂಧೆ ವ್ಯವಹಾರದ ಬೆನ್ನತ್ತಿರುವ ಪೊಲೀಸ್ ಇಲಾಖೆಗೂ ಯಾರು ದಂಧೆ ಮಾಡುತ್ತಿದ್ದಾರೆ ಅನ್ನುವ ವಿಚಾರ ಗೊತ್ತು. ಕೇವಲ ಇಬ್ಬರು ನಟಿಯರನ್ನ ಮುಂದೆ ಇಟ್ಟುಕೊಂಡು ಕನ್ನಡ ಚಿತ್ರರಂಗಕ್ಕೆ ಮಸಿ ಬಳಿಯುವ ಕೆಲಸವನ್ನ ಬಿಜೆಪಿ ಮಾಡುತ್ತಿದೆ ಎಂದು ಕಿಡಿಕಾರಿದರು.
ಇದೇ ವೇಳೆ ಕೊರೊನಾ ಹೆಸರಿನಲ್ಲಿ ನಡೆದಿರುವ ಹಗರಣವನ್ನ ಮುಚ್ಚಿ ಹಾಕಲು ಬಿಜೆಪಿ ಯತ್ನ ಮಾಡುತ್ತಿದೆ ಎಂದ ಅವರು, ಡ್ರಗ್ಸ್ ವಿಚಾರವನ್ನ ಬಿಜೆಪಿ ದೊಡ್ಡದು ಮಾಡುತ್ತಿದೆ. ಈ ಮೂಲಕ ಕೊರೊನಾ ಹಗರಣವನ್ನ ಮುಚ್ಚಿ ಹಾಕುವ ಯತ್ನ ನಡೆದಿದೆ. ಬಿಜೆಪಿ ಮೊದಲು ಹುಡುಗರನ್ನ ಬಳಸಿಕೊಂಡು ನಡೆಸುತ್ತಿರುವ ಡ್ರಗ್ಸ್ ದಂಧೆಯನ್ನು ತನಿಖೆ ಮಾಡಲಿ. ಇದಕ್ಕಾಗಿ ಒಂದು ಸಮಿತಿ ರಚನೆ ಮಾಡಿ ತನಿಖೆ ಮಾಡಲಿ ಎಂದು ಒತ್ತಾಯಿಸಿದರು.
ಕೊರೊನಾ ವಿಚಾರವನ್ನ ರಾಜ್ಯ ಸರ್ಕಾರ ಮರೆತಿದೆ. ಈ ವಿಚಾರವನ್ನ ಬೇರೆಕಡೆ ಡೈವರ್ಟ್ ಮಾಡಲು ಯಾರೋ ಇಬ್ಬರು ನಟಿಯರ ವಿಚಾರವನ್ನ ದೊಡ್ಡದು ಮಾಡುತ್ತಿದ್ದಾರೆ. ಡ್ರಗ್ಸ್ ದಂಧೆ ವಿಚಾರ ಈ ಸರ್ಕಾರಕ್ಕೆ ಮೊದಲೇ ಗೊತ್ತಿತ್ತು. ಇಲ್ಲಾ ಅಂದ್ರೆ ಏಕಾ ಏಕಿ ಟನ್ ಗಟ್ಟಲೆ ಡ್ರಗ್ಸ್ ಸಿಕ್ಕುತ್ತಿರಲಿಲ್ಲ. ಯಾರೇ ತಪ್ಪು ಮಾಡಿದ್ರೂ ಶಿಕ್ಷೆ ಕೊಡಲಿ. ಗ್ಲಾಮರ್ ಹಾಗೂ ಕನ್ನಡ ಚಿತ್ರರಂಗವನ್ನ ಬಳಸಿಕೊಂಡು ಇಡೀ ರಾಜ್ಯದ ಜನರ ದಿಕ್ಕನ್ನ ತಪ್ಪಿಸುವ ವ್ಯವಸ್ಥಿತ ಪಿತೂರಿಯನ್ನ ಬಿಜೆಪಿ ಸರ್ಕಾರ ಮಾಡುತ್ತಿದೆ ಎಂದು ಗರಂ ಆದರು.