ಕಾರವಾರ: ಬ್ಯಾಂಕ್ ನಲ್ಲಿ ಮರಾಠಿ ಹಾಗೂ ಹಿಂದಿಯಲ್ಲೇ ವ್ಯವಹರಿಸುವಂತೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಮಿರ್ಜಾನ್ ಕೆನರಾ ಬ್ಯಾಂಕ್ ನ ಸಹಾಯಕ ಮ್ಯಾನೇಜರ್ ದೀಪ್ ಜಿತ್ ಗ್ರಾಯಕರಿಗೆ ಕಿರಕ್ ಮಾಡುತಿದ್ದ. ಇದನ್ನು ಅರಿತ ಕರವೇ ಜಿಲ್ಲಾಧ್ಯಕ್ಷ ಭಾಸ್ಕರ್ ಪಟಗಾರ್ ಹಾಗೂ ಸ್ಥಳೀಯ ಮುಖಂಡ ಶಿವರಾಮ್ ಹರಿಕಾಂತ ಸೇರಿ ಹಲವರು ಇಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಬ್ಯಾಂಕ್ ಗೆ ತೆರಳಿ ಗ್ರಾಹಕರಿಗೆ ಮರಾಠಿ, ಹಿಂದಿಯಲ್ಲಿ ವ್ಯವಹರಿಸಲು ಒತ್ತಾಯಿಸಿದ ಮ್ಯಾನೇಜರ್ ಗೆ ಕನ್ನಡ ಕಲಿಯಲು ತಿಂಗಳ ಗಡುವು ನೀಡಿದ್ದಾರೆ. ಅಲ್ಲದೆ ಬ್ಯಾಂಕ್ ಗೆ ಬರುವ ಕನ್ನಡ ಗ್ರಾಹಕರಿಗೆ ತೊಂದರೆ ಕೊಡದಂತೆ ಎಚ್ಚರಿಕೆ ನೀಡುವ ಜೊತೆ ಜಿಲ್ಲಾಧಿಕಾರಿಗಳಿಗೆ ಸೇರಿದಂತೆ ಬ್ಯಾಂಕ್ ನ ಮುಖ್ಯ ಅಧಿಕಾರಿಗೆ ದೂರು ನೀಡಿದ್ದಾರೆ.
ಮಹಾರಾಷ್ಟ್ರ ಮೂಲದ ದೀಪ್ ಜಿತ್ ಎಂಬ ಸಹಾಯಕ ಮ್ಯಾನೇಜ್ ಮಿರ್ಜಾನ್ ಶಾಖೆಯಲ್ಲಿ ಕಾರ್ಯನಿರ್ವಹಿಸುತಿದ್ದು, ಶಾಖೆಗೆ ಬರುವ ಕನ್ನಡ ಗ್ರಾಹಕರನ್ನು ತುಚ್ಛವಾಗಿ ಕಾಣುತಿದ್ದರು. ಹಿಂದಿ ಹಾಗೂ ಮರಾಠಿ ಬಾರದ ಗ್ರಾಹಕರಿಗೆ ಸ್ಪಂದಿಸದ ಮ್ಯಾನೇಜರ್ ಕನ್ನಡಿಗರನ್ನು ಕೀಳಾಗಿ ನೋಡುತಿದ್ದರು. ಕನ್ನಡ ಕಲಿತು ವ್ಯವಹರಿಸುಲು ತಿಳಿದವರು ಹೇಳಿದಾಗಲೂ ಉಡಾಪೆ ಉತ್ತರ ನೀಡುವ ಜೊತೆಗೆ ಕನ್ನಡದ ಬಗ್ಗೆ ಕೇವಲವಾಗಿ ಮಾತನಾಡುತಿದ್ದರು.
ಹೀಗಾಗಿ ಈ ಕುರಿತು ಅನೇಕ ಗ್ರಾಹಕರು ಕನ್ನಡ ಸಂಘಟನೆಗೆ ತಿಳಿಸಿದ್ದು, ಇಂದು ಕಚೇರಿಗೆ ತೆರಳಿ ಕನ್ನಡ ಭಾಷೆ ಹಾಗೂ ಕನ್ನಡಿಗರನ್ನು ತುಚ್ಛವಾಗಿ ಕಂಡಲ್ಲಿ ಕಚೇರಿ ಮುಂದೆ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ಕನ್ನಡ ಪರ ಸಂಘಟನೆಯ ಕಾರ್ಯಕರ್ತರು ನೀಡಿದ್ದಾರೆ. ಒಂದು ತಿಂಗಳೊಳಗೆ ಕನ್ನಡ ಕಲಿಯುವಂತೆ ಸಹಾಯಕ ಮ್ಯಾನೇಜರ್ಗೆ ಗಡುವು ನೀಡಿದ್ದಾರೆ.