ಬೆಂಗಳೂರು: ಸರಳ ದೀಪಾಳಿ ಆಚರಣೆ ಮೂಲಕ ಕತ್ತಲೆಯಂತೆ ಇರುವ ಕೊರೊನಾ ದುಸ್ಥಿತಿಯಿಂದ ಬೆಳಕಿನ ಕಡೆಗೆ ಹೋಗಬೇಕಿದೆ. ನಿಯಮಗಳನ್ನು ಮೀರಿ ಕದ್ದು ಮುಚ್ಚಿ ಪಟಾಕಿ ಸಿಡಿಸುವವರ ಮೇಲೆ ನಿಗಾ ವಹಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಸಚಿವ ಸುಧಾಕರ್ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಪಟಾಕಿ ನಿಷೇಧ ಬಗ್ಗೆ ಸಿಎಂ ಅವರು ಘೋಷಿಸಿದ್ದಾರೆ. ಈ ಬಾರಿ ಸರಳ ದೀಪಾವಳಿ ಮಾಡಿ ಎಂದು ನಾಡಿನ ಜನರಿಗೆ ಕರೆ ನೀಡಿದ್ದಾರೆ. ಈ ವರ್ಷ ಯಾರೂ ಪಟಾಕಿ ಸಿಡಿಸದೆ ಅರ್ಥ ಪೂರ್ಣವಾಗಿ ಹಬ್ಬವನ್ನು ಆಚರಣೆ ಮಾಡಬೇಕಿದೆ. ಆರೋಗ್ಯದ ದೃಷ್ಟಿಯಿಂದ ಪಟಾಕಿ ನಿಷೇಧ ಮಾಡಲಾಗಿದೆ. ಜನರ ಸಂತೋಷವನ್ನು ದೂರ ಮಾಡಲು ನಾವು ಈ ಕ್ರಮಕೈಗೊಂಡಿಲ್ಲ ಎಂದು ಸ್ಪಷ್ಟನೆ ನೀಡಿದರು.
ಆರೋಗ್ಯ ಇಲಾಖೆಯ ತಾಂತ್ರಿಕ ಸಮಿತಿಯಿಂದ ನೀಡಿರುವ ವರದಿ ಅನ್ವಯ ದೀಪಾಳಿ ಹಬ್ಬದ ಸಂದರ್ಭದಲ್ಲಿ ಪಟಾಕಿ ನಿಷೇಧ ಮಾಡಲಾಗಿದೆ. ಕದ್ದು ಮುಚ್ಚಿ ಪಟಾಕಿ ಸಿಡಿಸುವವರ ಮೇಲೂ ನಿಗಾ ವಹಿಸಲಾಗುವುದು. ಪಟಾಕಿ ಸಿಡಿಸುವುದನ್ನು ತಡೆಯಲು ನಿಯಮ ರೂಪಿಸುತ್ತೇವೆ. ಇಂದು ಅಥವಾ ನಾಳೆ ಪಟಾಕಿ ನಿಷೇಧದ ರೂಪುರೇಷೆಗಳನ್ನು ಅಂತಿಮಗೊಳಿಸುತ್ತೇವೆ. ಜನರು ಕೂಡ ಪಟಾಕಿ ನಿಷೇಧಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿದರು.