ಉಡುಪಿ: ಕತಾರಿನಲ್ಲಿರುವ ಭಾರತ ಮೂಲದ ಆಡಳಿತ ಸಮಿತಿಯ ಚುನಾವಣೆಯಲ್ಲಿ ಸುಬ್ರಮಣ್ಯ ಹೆಬ್ಬಾಗಿಲು ಅವರು ಅತಿ ಹೆಚ್ಚು ಮತಗಳನ್ನು ಪಡೆದಿದ್ದಾರೆ. ಭಾರತೀಯ ಸಾಂಸ್ಕೃತಿಕ ಕೇಂದ್ರದ ಮುಂದಿನ 2 ವರ್ಷಗಳ ಆಡಳಿತ ಸಮಿತಿಗೆ ಸುಬ್ರಮಣ್ಯ ಆಯ್ಕೆಯಾಗಿದ್ದಾರೆ.
ಉಡುಪಿ ಜಿಲ್ಲೆ ಬೈಂದೂರು ಮೂಲದ ಸುಬ್ರಮಣ್ಯ, ಕಳೆದ ಒಂದು ದಶಕದಿಂದ ಕತಾರಿನಲ್ಲಿ ನೆಲೆಸಿರುವ ಭಾರತೀಯರಿಗೆ ಸಹಾಯ ಮಾಡುತ್ತಿದ್ದು, ಕೊರೊನಾ ಕಾಲದಲ್ಲಿ ಕತಾರ್ ನಲ್ಲಿ ಆಹಾರ ಕಿಟ್ ಗಳು, ಧನ ಸಹಾಯ ಮಾಡುವ ನೇತೃತ್ವ ವಹಿಸಿದ್ದರು. ಭಾರತೀಯರನ್ನು ಕತಾರ್ ನಿಂದ ವಾಪಾಸ್ ಕಳುಹಿಸುವ ಬ್ಯಾಚ್ ಗಳು, ಕೊರೊನಾ ಹೆಲ್ತ್ ರಿಪೋರ್ಟ್ ತರಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು.
ಡಿಜಿಪೋಲ್ ಎಂಬ ತಂತ್ರಾಂಶವನ್ನು ಕತಾರ್ ಚುನಾವಣೆಗೆಂದೇ ತಯಾರು ಮಾಡಲಾಗಿತ್ತು. ಸದಸ್ಯರ ಮೊಬೈಲ್ ಮೂಲಕ ಮತದಾನ ಮಾಡಿದ್ದರು. ಕತಾರ್ ನಲ್ಲಿದ್ದ ಸುಮಾರು ಶೇ.90 ಸದಸ್ಯರು ಮತ ಚಲಾಯಿಸಿದ್ದಾರೆ.
ಸುಬ್ರಮಣ್ಯ ಈ ಹಿಂದೆ ಭಾರತೀಯ ಸಮುದಾಯ ಹಿತೈಷಿ ವೇದಿಕೆ (ಐ.ಸಿ.ಬಿ.ಎಫ್) ಯ ಆಡಳಿತ ಸಮಿತಿಯ ಜಂಟಿ ಕಾರ್ಯದರ್ಶಿಯಾಗಿ, ಕರ್ನಾಟಕ ಸಂಘ ಕತಾರಿನ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿರುತ್ತಾರೆ.