-ಭಾಷೆ ಬರದ ನಾಡಿನಲ್ಲಿ ಸಿಲುಕಿದ ಕನ್ನಡಿಗರು
-ಮೈಸೂರಿನಿಂದ ಕತಾರ್ ಗೆ ಹೋಗಿದ್ದಾದ್ರೂ ಹೇಗೆ?
ಬೆಂಗಳೂರು: ಮೈಸೂರು ಜಿಲ್ಲೆಯ ಹಕ್ಕಿ ಪಿಕ್ಕಿ ಸಮುದಾಯಕ್ಕೆ ಸೇರಿದ ಆರು ಜನರಿರುವ ಎರಡು ಕುಟುಂಬದ ಸದಸ್ಯರು ಕತಾರ್ ನಲ್ಲಿ ಸಿಲುಕಿಕೊಂಡು ಕಂಗಾಲಾಗಿದ್ದಾರೆ. ಭಾಷೆ ಬಾರದ ದೇಶದಲ್ಲಿ ಎರಡೂವರೆ ತಿಂಗಳಿನಿಂದ ಸಿಲುಕಿ ವಾಪಸ್ ಬರಲು ಆರ್ಥಿಕ ಶಕ್ತಿ ಇಲ್ಲದೆ ತವರು ಸೇರಲು ಸಹಾಯ ಕೇಳುತ್ತಿದ್ದಾರೆ.
ಆಗಿದ್ದೇನು? ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಪಕ್ಷರೇಶ್ವರ ಎಂಬ ಹಳ್ಳಿಯ ಕಾಡಂಚಿನಲ್ಲಿರುವ ಹಕ್ಕಿ ಪಿಕ್ಕಿ ಸಮುದಾಯಕ್ಕೆ ಸೇರಿದ ಸುಬ್ರಮಣ್ಯ, ಜ್ಯೋತಿ, ಗೋಪಿ, ಚಂದ್ರಕಾಂತ್, ಕುಮಾರ್, ಮೀನಾ ಎಂಬವರು ಕಾಡಲ್ಲಿ ಸಿಗುವ ಗಿಡ ಮೂಲಿಕೆಗಳಿಂದ ವನೌಷಧ, ಮಸಾಜ್ ಮಾಡುವ ತೈಲ ತಯಾರು ಮಾಡುವ ಕೆಲಸ ಮಾಡಿಕೊಂಡಿದ್ದರು. ಅಲ್ಲದೇ ಈ ಉತ್ಪನ್ನಗಳನ್ನು ದೇಶದ ಇತರ ಮಹಾನಗರಗಳಲ್ಲಿ ನಡೆಯುವ ಆಯುರ್ವೇದ ಹಾಗೂ ಇತರ ಮೇಳಗಳಲ್ಲಿ ಪ್ರದರ್ಶನ ಹಾಗೂ ಮಾರಾಟ ಮಾಡಿಕೊಂಡು ಜೀವನ ನಡೆಸುತ್ತಿದ್ದರು.
ಕತಾರ್ ಆಸೆ: ಇದೇ ರೀತಿ ಮೇಳಗಳಲ್ಲಿ ವನೌಷಧ ಮಾರಿಕೊಂಡು ಜೀವನ ನಡೆಸುತ್ತಿರುವವರಿಗೆ ಯಾರೋ ಕತಾರ್ ನಲ್ಲಿ ಈ ರೀತಿಯ ವನೌಷಧ ಹಾಗೂ ಗಿಡಮೂಲಿಕೆಗಳಿಗೆ ಬೆಲೆ ಇದೆ. ಹಾಗೂ ಅಲ್ಲಿ ಇದರ ಮೇಳ ನಡೆಯುತ್ತಿದೆ ಎಂದು ಹೇಳಿದನ್ನು ನೆಚ್ಚಿಕ್ಕೊಂಡು ಕತಾರ್ ಗೆ ಆರು ಜನರ ಎರಡು ಕುಟುಂಬಗಳು ಮಾರ್ಚ್ ಮೊದಲ ವಾರದಲ್ಲಿ ಕತಾರ್ ಗೆ ತೆರಳಿದ್ದಾರೆ. ಆದರೆ ಅಲ್ಲಿಗೆ ಹೋಗುವಷ್ಟರಲ್ಲಿ ಪ್ರದರ್ಶನ ಆರಂಭವಾಗುವ ಮೊದಲೇ ಲಾಕ್ಡೌನ್ ಘೋಷಣೆಯಾಗಿದ್ದು, ಮುಂದೇನು ಮಾಡಬೇಕು ಎಂದು ತಿಳಿಯದೇ ದಿಕ್ಕು ತೋಚದಂತಾಗಿ ಕುಳಿತುಕೊಂಡಿದ್ದಾರೆ.
ನೆರವಿಗೆ ಬಂದ ಕನ್ನಡ ಸಂಘ: ತಾವು ಸಂಕಷ್ಟದಲ್ಲಿ ಸಿಲುಕಿ ದಿಕ್ಕು ತೋಚದೇ ಊರಿಗೆ ಕರೆ ಮಾಡಿದ್ದಾರೆ. ಅಲ್ಲದೆ ಭಾರತೀಯ ರಾಯಭಾರಿ ಕಚೇರಿ ನಂಬರ್ ಪಡೆದು ತಾವು ಕನ್ನಡದವರು ಎಂದು ಹೇಳಿಕೊಂಡಿದ್ದಾರೆ. ಕನ್ನಡದವರು ಎಂದ ಕೂಡಲೇ ಭಾರತೀಯ ರಾಯಭಾರಿ ಕಚೇರಿಯವರು ಕತಾರ್ ನಲ್ಲಿರುವ ಕನ್ನಡ ಸಂಘದ ಸುಬ್ರಮಣ್ಯ ಹೆಬ್ಬಾಗಿಲು ಅವರಿಗೆ ಮಾಹಿತಿ ನೀಡಿದ್ದಾರೆ.