ಬೆಂಗಳೂರು: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನ ವಿರುದ್ಧದ ಅಭಿಪ್ರಾಯಗಳಿಂದ ಮನನೊಂದು ವೀಡಿಯೋ ಮಾಡಿ ಕಣ್ಣೀರು ಹಾಕಿದ ನಿರೂಪಕಿ, ನಟಿ ಅನುಶ್ರೀಗೆ ಕಿರುತೆರೆ ನಟಿ ಗೀತಾಭಾರತಿ ಭಟ್ ಧೈರ್ಯ ತುಂಬಿದ್ದಾರೆ.
ಅನುಶ್ರೀ ಅವರು ಇನ್ಸ್ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿದ್ದ ವೀಡಿಯೋಗೆ ಕಮೆಂಟ್ ಮಾಡಿರುವ ‘ಬ್ರಹ್ಮಗಂಟು’ ನಟಿ, ನಾವೆಲ್ಲರೂ ನಿಮ್ಮ ಜೊತೆಗಿದ್ದೇವೆ. ಧೈರ್ಯವಾಗಿದ್ದು, ಎದುರಿಸಿ. ನನ್ನ ಪ್ರೀತಿ ಹಾಗೂ ಧೈರ್ಯ ಸದಾ ನಿಮ್ಮೊಂದಿಗಿರುತ್ತೆ ಎಂದು ಸಾಂತ್ವನ ನೀಡಿದ್ದಾರೆ. ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಗೀತಾಭಾರತಿ ಭಟ್ ಕೂಡ ಈ ಹಿಂದೆ ವಿಚಾರಣೆ ಎದುರಿಸಿದ್ದರು. ಅಲ್ಲದೆ ಮುಂದೆ ವಿಚಾರಣೆಗೆ ಕರೆದರೂ ಹಾಜರಾಗುವುದಾಗಿ ತಿಳಿಸಿದ್ದರು.
ವೀಡಿಯೋದಲ್ಲಿ ಅನುಶ್ರೀ ಹೇಳಿದ್ದೇನು?
20020ರ ಸೆಪ್ಟೆಂಬರ್ 24 ನನ್ನ ಜೀವನದ ಯಾವ ಘಟ್ಟದಲ್ಲೂ ನಾನು ಮತ್ತೆ ನೆನಪಿಸಿಕೊಳ್ಳೋದಕ್ಕೆ ಇಷ್ಟಪಡದಿರುವಂತಹ ದಿನ. 12 ವರ್ಷಗಳ ಹಿಂದೆ ನಾನು ಡ್ಯಾನ್ಸ್ ರಿಯಾಲಿಟಿ ಶೋ ಒಂದರಲ್ಲಿ ಗೆದ್ದಾಗ, ಆ ದಿನ ಭವಿಷ್ಯದಲ್ಲಿ ಮುಳ್ಳಾಗುತ್ತೆ ಅಂತ ಅಂದುಕೊಂಡಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ನೋಟಿಸ್ ಬಂದಿರುವುದು ನನಗೆ ಬೇಜಾರಾಗಿಲ್ಲ. ಸಿಸಿಬಿ ಕಚೇರಿಗೆ ಹೋದ ಮಾತ್ರಕ್ಕೆ ನಾನು ಅಪರಾಧಿ ಅಥವಾ ಆರೋಪಿ ಅಂತ ಆಗುವುದಿಲ್ಲ. ಆ ವಿಚಾರದಲ್ಲಿ ನನ್ನನ್ನು ಬಿಂಬಿಸಿದ ರೀತಿ ನನಗೆ ತುಂಬಾನೇ ನೋವು ಮಾಡಿತ್ತು. ನೋವು ತುಂಬಾ ಸಣ್ಣ ಪದ. ಕಳೆದ ಒಂದು ವಾರದಿಂದ ನಮ್ಮ ಮನೆಯವರ ನೆಮ್ಮದಿಯನ್ನು ಹಾಳು ಮಾಡಿತ್ತು. ಆದರು ಕೂಡ ಈ ಕಷ್ಟಕಾಲದಲ್ಲಿ ಏನೂ ಹೆಳದೆ, ಏನೂ ಕೇಳದೆ ಅನುಶ್ರೀ ನಿವೇನು ಅಂತ ನಮಗೆ ಚೆನ್ನಾಗಿ ಗೊತ್ತು. ನಿಮ್ಮ ಮೇಲೆ ನಮಗೆ ಅಪಾರವಾದ ನಂಬಿಕೆ ಇದೆ ಅಂತ ನನ್ನ ಜೊತೆ ನಿಂತಿರುವ ಎಲ್ಲಾ ಕನ್ನಡಿಗರಿಗೆ ತುಂಬು ಹೃದಯದ ಧನ್ಯವಾದಗಳು. ಇದನ್ನು ನಾನು ಯಾವತ್ತೂ ಮರೆಯಲ್ಲ ಎಂದು ಹೇಳಿದ್ದಾರೆ.
ಇದನ್ನು ಮೀರಿ ಕೂಡ ಸುತ್ತಮುತ್ತ ಕೆಲವೊಂದಷ್ಟು ಅಭಿಪ್ರಾಯಗಳು, ವಿಚಾರಗಳು, ಅಂತೆಕಂತೆಗಳು ಇದು ನಮ್ಮ ನೆಮ್ಮದಿನ ತುಂಬಾನೇ ಹಾಳು ಮಾಡುತ್ತಿದೆ. ದಯಮಾಡಿ ಇಂತಹ ವಿಚಾರಗಳನ್ನು ಹರಿದಾಡಿಸುವ ಮುನ್ನ ಒಂದು ಬಾರಿ ನಮ್ಮ ಮನಸ್ಥಿತಿ ಬಗ್ಗೆ ಯೋಚನೆ ಮಾಡಿ. ನಾನಿಷ್ಟೆ ನಿಮ್ಮಲ್ಲಿ ಕೇಳಿಕೊಳ್ಳುತ್ತಿದ್ದೇನೆ ಎಂದು ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: 14 ವರ್ಷದ ಹಿಂದೆ ಬಸ್ ಹತ್ಕೊಂಡು ಬಂದು ಬೆಂಗ್ಳೂರಲ್ಲಿ ನೆಲೆ ಕಂಡಿದ್ದೇನೆ: ಗಳಗಳನೇ ಅತ್ತ ಅನುಶ್ರೀ
ಇಷ್ಟೊಂದು ಕಷ್ಟದ ದಿನಗಳಲ್ಲಿ ನನಗೆ ನೆರಳಾಗಿ ನಿಂತಿರುವ ನನ್ನ ಕುಟುಂಬ, ನನ್ನ ತಂಡ, ಸ್ನೇಹಿತರು ಎಲ್ಲರಿಗೂ ಧನ್ಯವಾದಗಳು. ನನ್ನ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ನನ್ನನ್ನು ಬೆಂಬಲಿಸುತ್ತಿರೋ ಮಾಧ್ಯಮಮಿತ್ರರಿಗೂ ಧನ್ಯವಾದ. ಕನ್ನಡಿಗರು ಕೊಟ್ಟ ಈ ಹೆಸರಿಗೆ ಧಕ್ಕೆ ಬರುವಂತಹ ಯಾವುದೇ ಕೆಲಸವನ್ನು ನಾನು ಮಾಡಿಲ್ಲ. ಮುಂದೆಯೂ ಮಾಡಲ್ಲ ಎಂದು ಹೇಳುತ್ತಾ ಅನುಶ್ರೀ ಗದ್ಗದಿತರಾಗಿದ್ದಾರೆ.