– 6 ಜನ ಬಾಲಕರ ಬಂಧನ
ಅಗರ್ತಲ: ಕಣ್ಣಾ ಮುಚ್ಚಾಲೆ ಆಡೋಣ ಬಾ ಎಂದು ಕರೆದು ಪುಸಲಾಯಿಸಿ 7 ಜನ ಅಪ್ರಾಪ್ತ ಬಾಲಕರು 8ರ ಬಾಲಕಿ ಮೇಲೆ ಅತ್ಯಾಚಾರ ಎಸಗಿರುವ ಆಘಾತಕಾರಿ ಘಟನೆ ನಡೆದಿದೆ.
ತ್ರಿಪುರಾದ ವೆಸ್ಟ್ ತ್ರಿಪುರಾ ಜಿಲ್ಲೆಯ ತಬಾರಿಯಾ ಗ್ರಾಮದಲ್ಲಿ ಘಟನೆ ನಡೆದಿದ್ದು, 7 ಜನ ಆರೋಪಿಗಳ ಪೈಕಿ 6 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಮತ್ತೊಬ್ಬ ತಪ್ಪಿಸಿಕೊಂಡಿದ್ದಾರೆ. ಬಂಧಿಸಿದ 6 ಜನರ ಪೈಕಿ ನಾಲ್ವರನ್ನು ಬಾಲಾಪರಾಧಿಗಳ ಕಾರಾಗೃಹದಲ್ಲಿರಿಸಲಾಗಿದೆ. ಇನ್ನಿಬ್ಬರು 12 ವರ್ಷದ ಆಸುಪಾಸಿನಲ್ಲಿದ್ದು, ಇವರಿಗೆ ಕೊರೊನಾ ಸೋಂಕು ತಗುಲಿರುವುದು ಪತ್ತೆಯಾದ ಹಿನ್ನೆಲೆ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಘಟನೆ ಕುರಿತು ತಿಳಿಯುತ್ತಿದ್ದಂತೆ ಬಾಲಕಿಯ ತಂದೆ ದೂರು ದಾಖಲಿಸಿದ್ದು, ಆರೋಪಿ ಹುಡುಗರು ಕಣ್ಣಾ ಮುಚ್ಚಾಲೆ ಆಡೋಣ ಬಾ ಎಂದು ಮಗಳನ್ನು ಕರೆದುಕೊಂಡು ಹೋಗಿದ್ದರು. ಈ ವೇಳೆ ಅವಳ ಮೇಲೆ ಅತ್ಯಾಚಾರ ಎಸಗಿದ್ದಾರೆ. ಶುಕ್ರವಾರ ಘಟನೆ ನಡೆದಿದೆ ಎಂದು ನ್ಯೂ ಕ್ಯಾಪಿಟಲ್ ಕಾಂಪ್ಲೆಕ್ಸ್ನ ಉಪ ವಿಭಾಗೀಯ ಪೊಲೀಸ್ ಅಧಿಕಾರಿ ಪ್ರಿಯಾ ಮಾಧುರಿ ಮಂಜುದಾರ್ ವಿವರಿಸಿದ್ದಾರೆ.
3ನೇ ತರಗತಿಯಲ್ಲಿ ಓದುತ್ತಿರುವ ಬಾಲಕಿ ಘಟನೆ ನಡೆದ ಬಳಿಕ ಈ ಕುರಿತು ಮನೆಯವರಿಗೆ ವಿವರಿಸಿದ್ದಾಳೆ. ಶನಿವಾರ ಈ ಕುರಿತು ದೂರು ದಾಖಲಾಗುತ್ತಿದ್ದಂತೆ ಬಾಲಕಿಯ ಹೇಳಿಕೆ ಆಧಾರದ ಮೇಲೆ ಬಾಲಕರನ್ನು ಬಂಧಿಸಲಾಗಿದೆ. ಒಟ್ಟು 7 ಜನರ ಹೆಸರನ್ನು ಎಫ್ಐಆರ್ನಲ್ಲಿ ದಾಖಲಿಸಲಾಗಿದೆ. ಇದರಲ್ಲಿ 6 ಜನರನ್ನು ಈಗಾಗಲೇ ಬಂಧಿಸಲಾಗಿದೆ. ಒಬ್ಬ ತಪ್ಪಿಸಿಕೊಂಡಿದ್ದಾನೆ ಎಂದು ಮಜುಂದಾರ್ ತಿಳಿಸಿದ್ದಾರೆ.