ಮಡಿಕೇರಿ: ಕಾಡಾನೆಯೊಂದು ಅರಣ್ಯ ದಾಟಿ ಕಾಫಿ ತೋಟಕ್ಕೆ ಬರುತ್ತಿದ್ದ ವೇಳೆ ಆಯತಪ್ಪಿ ಕಂದಕಕ್ಕೆ ಬಿದ್ದು ಮೇಲೇಳಲು ಸಾಧ್ಯವಾಗದೆ ಪರಿತಪಿಸುತ್ತಿತ್ತು. ಬಳಿಕ ಅರಣ್ಯ ಇಲಾಖೆ ಸಿಬ್ಬಂದಿ ಜೆಸಿಬಿ ಮೂಲಕ ಮೇಲೆತ್ತಿದ್ದು, ಈ ಸಂದರ್ಭದಲ್ಲಿ ಒಂಟಿ ಸಲಗ ಜೆಸಿಬಿ ವಿರುದ್ಧವೇ ತಿರುಗಿಬಿದ್ದಿದೆ.
ಜಿಲ್ಲೆಯ ವಿರಾಜಪೇಟೆ ತಾಲೂಕಿನ ಅವರೆಗುಂದ ಅರಣ್ಯದಂಚಿನಲ್ಲಿ ಘಟನೆ ನಡೆದಿದ್ದು, ಸಿದ್ದಾಪುರ ಸಮೀಪದ ಅವರೆಗುಂದ ಅರಣ್ಯದಂಚಿನಲ್ಲಿ ಕಾಡಾನೆಯೊಂದು ಆನೆ ಕಂದಕಕ್ಕೆ ಜಾರಿ ಬಿದ್ದಿತ್ತು. ಅರಣ್ಯ ಇಲಾಖೆ ಸಿಬ್ಬಂದಿ ಬೆಳಗ್ಗೆ ಗಸ್ತಿನಲ್ಲಿದ್ದ ಸಂದರ್ಭ ಆನೆ ಕಿರುಚಾಟದ ಶಬ್ದ ಕೇಳಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಕಂದಕದಲ್ಲಿ ಆನೆ ಬಿದ್ದಿರುವುದು ಕಂಡುಬಂದಿದೆ.
ತಕ್ಷಣವೇ ಅರಣ್ಯ ಇಲಾಖೆಯ ಸಿಬ್ಬಂದಿ ಮರದ ಕೊಂಬೆಗಳನ್ನು ಇಟ್ಟು ಆನೆಯನ್ನು ಮೇಲೆತ್ತಲು ಹರಸಾಹಸ ಪಟ್ಟರೂ ಸಾಧ್ಯವಾಗಲಿಲ್ಲ. ಬಳಿಕ ಜೆಸಿಬಿ ಮೂಲಕ ಮಣ್ಣು ಸಮತಟ್ಟು ಮಾಡಿ, ಆನೆಯನ್ನು ಮೇಲೆತ್ತುವ ಸಂದರ್ಭದಲ್ಲಿ ಜೆಸಿಬಿ ಮೇಲೆಯೇ ದಾಳಿ ನಡೆಸಿದೆ. ಬಳಿಕ ಅರಣ್ಯ ಇಲಾಖೆಯ ಸಿಬ್ಬಂದಿ ಪಟಾಕಿ ಸಿಡಿಸಿ ಒಂಟಿ ಸಲಗವನ್ನು ಕಾಡಿಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.