ಮಡಿಕೇರಿ: ಕಂಟೈನ್ಮೆಂಟ್ ಏರಿಯಾದಲ್ಲಿ ಇರುವ ಜನರಿಗೆ ಉಚಿತ ಆಹಾರ ಮತ್ತು ಅಗತ್ಯ ವಸ್ತುಗಳ ಪೂರೈಕೆ ಮಾಡುತ್ತಿಲ್ಲ ಎಂದು ಕಂಟೈನ್ಮೆಂಟ್ ಝೋನ್ ಜನರು ಮನೆಯಿಂದ ಹೊರಬಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಡಿಕೇರಿಯ ಗೌಳಿಬೀದಿಯ ವ್ಯಕ್ತಿಯೊಬ್ಬರಿಗೆ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಈ ಏರಿಯಾವನ್ನು ಸೀಲ್ಡೌನ್ ಮಾಡಲಾಗಿದೆ.
ಏರಿಯಾದಲ್ಲಿರುವ ಬಹುತೇಕ ಜನರು ಕೂಲಿ ಕೆಲಸ ಮಾಡಿ ಅಂದು ದುಡಿದು ಅಂದು ತಿನ್ನುವವರಿದ್ದೇವೆ. ಆದರೆ ಸೀಲ್ಡೌನ್ ಮಾಡಿರುವ ಜಿಲ್ಲಾಡಳಿತ ಜನರಿಗೆ ಯಾವುದೇ ಅಗತ್ಯ ವಸ್ತುಗಳನ್ನು ಪೂರೈಸುತ್ತಿಲ್ಲ. ಬದಲಾಗಿ ಹಣಕೊಟ್ಟೆ ಕೊಂಡುಕೊಳ್ಳಿ ಎನ್ನುತ್ತಿದೆ. ಕಂಟೈನ್ಮೆಂಟ್ ಝೋನ್ ಮಾಡಿ ಒಳಗೆ ಕುಳಿತುಕೊಂಡು ಹಣಕೊಟ್ಟು ಕೊಂಡುಕೊಳ್ಳಿ ಎಂದರೆ ಹೇಗೆ ಸಾಧ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಂಟೈನ್ಮೆಂಟ್ ಏರಿಯಾದಲ್ಲಿ ಜನರು ಮನೆಯಿಂದ ಹೊರಗೆ ಬರುವಂತಿಲ್ಲ. ಆದರೆ ಅಗತ್ಯ ವಸ್ತುಗಳು ಸಿಗದ ಹಿನ್ನೆಲೆಯಲ್ಲಿ ಜನರು ಕೊರೊನಾದ ಯಾವುದೇ ಆತಂಕವಿಲ್ಲದೆ ಮನೆಯಿಂದ ಹೊರಬಂದು ತಮ್ಮ ನೋವು ತೋಡಿಕೊಂಡರು. ಜಿಲ್ಲಾಡಳಿತ ಕಂಟೈನ್ಮೆಂಟ್ ಏರಿಯಾದಲ್ಲಿರುವ ಎಲ್ಲಾ ಕುಟುಂಬಗಳಿಗೂ ಅಗತ್ಯ ವಸ್ತುಗಳ ಪೂರೈಕೆ ಮಾಡಲಿ. ಇಲ್ಲವೆ ಕಂಟೈನ್ಮೆಂಟ್ ಝೋನ್ ತೆರವುಗೊಳಿಸಿ ನಮ್ಮ ದುಡಿಮೆಗಾದರೂ ಅವಕಾಶ ನೀಡಲಿ ಎಂದು ಒತ್ತಾಯಿಸಿದರು.