– ಆರ್ಮಿ ಮೇಜರ್ ಅಂತೇಳಿ ಫೋಟೋ ಅಪ್ಲೋಡ್
– ನಕಲಿ ಆಧಾರ್ ಕಾರ್ಡ್, ಅಂಕಪಟ್ಟಿ, ಐಡಿ ಕಾರ್ಡ್
ಹೈದರಾಬಾದ್: ಆರ್ಮಿ ಮೇಜರ್ ಎಂದು ಸುಳ್ಳು ಹೇಳಿ 17 ಯುವತಿಯರಿಂದ 6.61 ಕೋಟಿ ರೂಪಾಯಿ ದೋಚಿದ ವಂಚಕ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಆರು ವರ್ಷ ಆರ್ಮಿ ಮೇಜರ್ ಎಂದು ಹೇಳಿ 17 ಯುವತಿಯರನ್ನ ಮೋಸಗೊಳಿಸಿ 6.61 ಕೋಟಿ ರೂ ವಂಚನೆ ಮಾಡಿದ್ದಾನೆ. ಇದೇ ರೀತಿಯಾಗಿ ಇನ್ನೊಬ್ಬ ಮಹಿಳೆಯನ್ನು ಮೋಸಗೊಳಿಸಲು ಪ್ರಯತ್ನಿಸುತ್ತಿದ್ದಾಗ ಆರೋಪಿ ಸಿಕ್ಕಿಬಿದ್ದಿದ್ದಾನೆ.
ಆರೋಪಿಯನ್ನು ಶ್ರೀವಾವಾಸ್ ಚೌಹಾನ್ ಎಂದು ಗುರುತಿಸಲಾಗಿದೆ. ಈತನ ನಿಜವಾದ ಹೆಸರು ಮುದವತ್ ಶ್ರೀನು ನಾಯಕ್. ಹೈದರಾಬಾದ್ನಲ್ಲಿ ಡ್ಯುಪ್ಲೆಕ್ಸ್ ಮನೆ ಮತ್ತು ಮರ್ಸಿಡಿಸ್ ಬೆಂಜ್ ಸೇರಿದಂತೆ ಮೂರು ಕಾರುಗಳನ್ನು ಖರೀದಿಸಲು ಮೋಸದ ಹಣವನ್ನು ಬಳಸಿದ್ದಾನೆ ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ
ಆರೋಪಿ ಹಿನ್ನೆಲೆ ಏನು?
ಶ್ರೀನಿವಾಸ್ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಕಿಲಂಪಳ್ಳಿ ಗ್ರಾಮದವನಾಗಿದ್ದಾನೆ. ಒಂಬತ್ತನೇ ತರಗತಿವರೆಗೆ ಮಾತ್ರ ಓದಿರುವ ಈತ ಮೇಘಾಲಯದ ವಿಶ್ವವಿದ್ಯಾಲಯದಿಂದ ಪರಿಸರ ಎಂಜಿನಿಯರಿಂಗ್ನಲ್ಲಿ ಎಂ.ಟೆಕ್ ಮಾಡಿದ್ದೇನೆ ಎಂದು ನಕಲಿ ಪ್ರಮಾಣಪತ್ರವನ್ನು ತೋರಿಸುತ್ತಿದ್ದನು.
ಗುಂಟೂರಿನಲ್ಲಿರುವ ಜಿಲ್ಲಾ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ ಕಚೇರಿಯಲ್ಲಿ ಅಧೀಕ್ಷಕರಾಗಿ ಕೆಲಸ ಮಾಡುತ್ತಿದ್ದ ಮಹಿಳೆಯನ್ನು 2002 ರಲ್ಲಿ ಶ್ರನಿವಾಸ್ ಚೌಹಾಣ್ ಮದುವೆಯಾಗಿದ್ದಾನೆ. ಒಬ್ಬ ಮಗನಿದ್ದಾನೆ ಮತ್ತು ಕುಟುಂಬವು ಗುಂಟೂರು ಜಿಲ್ಲೆಯ ವಿನುಕೊಂಡದಲ್ಲಿ ವಾಸಿಸುತ್ತಿದ್ದಾರೆ.
ಮೋಸ ಮಾಡಿದ್ದು ಹೇಗೆ?
2014 ರಲ್ಲಿ ಆರೋಪಿ ಶ್ರೀನಿವಾಸ್ ಹೈದರಾಬಾದ್ಗೆ ಬಂದು ಜವಾಹರನಗರದ ಸೈನಿಕಪುರಿಯಲ್ಲಿ ವಾಸಿಸುತ್ತಿದ್ದ ಶ್ರೀನಿವಾಸ್ ಸೇನಾ ಕಚೇರಿಯಲ್ಲಿ ಕೆಲಸ ಸಿಕ್ಕಿದೆ ಎಂದು ಪತ್ನಿಗೆ ಸುಳ್ಳು ಹೇಳಿದ್ದನು. ಕೆಲವು ತುರ್ತು ಕೆಲಸಗಳಿಗೆ ಹಣ ಬೇಕು ಎಂದು ಹೇಳಿ ಪತ್ನಿಯಿಂದ 67 ಲಕ್ಷ ರೂ. ಪಡೆದಿದ್ದನು.ಆರೋಪಿ ಎಂ.ಎಸ್ ಹೆಸರಿನಲ್ಲಿ ಆಧಾರ್ ಕಾರ್ಡ್ ಪಡೆದಿದ್ದನು. ಆರ್ಮಿ ಸಮವಸ್ತ್ರದಲ್ಲಿ ತೆಗೆದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದನು.
ಸೇನಾ ಸಿಬ್ಬಂದಿಯನ್ನು ಮಗಳಿಗೆ ವರನಾಗಿ ಹುಡುಕುವ ಕುಟುಂಬಗಳನ್ನು ಟಾರ್ಗೆಟ್ ಮಾಡುತ್ತಿದ್ದನು. ವೈವಾಹಿಕ ವೆಬ್ಸೈಟ್ಗಳ ಮೂಲಕವು ಜನರನ್ನು ಮೋಸ ಗೊಳಿಸಲು ಪ್ರಾರಂಭಿಸಿದನು. ಪುಣೆಯ ರಾಷ್ಟ್ರೀಯ ರಕ್ಷಣಾ ಅಕಾಡೆಮಿಯಿಂದ ತರಬೇತಿ ಪಡೆದವರು ಎಂದು ಹೇಳಿಕೊಂಡು ತಮ್ಮ ಬಯೋಡೇಟಾವನ್ನು ವಧುವಿನ ಕುಟುಂಬಕ್ಕೆ ಕಳುಹಿಸುತ್ತಿದ್ದನು.
ವಧುವಿನ ಕುಟುಂಬದವರಿಗೆ ನಂಬಿಕೆ ವಿಶ್ವಾಸವನ್ನು ಕಾಪಾಡಿಕೊಳ್ಳಲು ಸದಸ್ಯರೊಂದಿಗೆ ಆನ್ಲೈನ್ನಲ್ಲಿ ಮಾತನಾಡುವಾಗ ಆರ್ಮಿ ಸಮವಸ್ತ್ರವನ್ನು ಧರಿಸುತ್ತಿದ್ದನು. ಯಾವುದೇ ವರದಕ್ಷಿಣೆ ಬೇಡ ಎಂದು ಹೇಳುವ ಮೂಲಕ ಅವರನ್ನು ಮೆಚ್ಚಿಸುವ ಕೆಲಸ ಮಾಡುತ್ತಿದ್ದನು. ಕುಟುಂಬಗಳೊಂದಿಗೆ ಕೆಲವು ಸಂಬಂಧಗಳನ್ನು ಬೆಳೆಸಿದ ನಂತರ ಕೆಲವು ತುರ್ತು ಅವಶ್ಯಕತೆಯ ನೆಪದಲ್ಲಿ ಹಣವನ್ನು ಕೇಳಲು ಪ್ರಾರಂಭಿಸುತ್ತಿದ್ದನು.
ವೈದ್ಯಕೀಯ ವಿದ್ಯಾರ್ಥಿನಿ ಇಂದ 56 ಲಕ್ಷ ರೂ., ವಾರಂಗಲ್ನ ಮತ್ತೊಂದು ಕುಟುಂಬವನ್ನು 2 ಕೋಟಿ ರೂ., ಗೋರಖ್ಪುರ ಐಐಟಿಯ ಯುವತಿಯಿಂದ 76 ಲಕ್ಷ ರೂ. ಮುದುವೆಯಾಗುವುದಾಗಿ ಹೇಳಿ ವಂಚನೆ ಮಾಡಿದ್ದಾನೆ. ಹೀಗೆ ಮತ್ತೊಂದು ಕುಟುಂಬವನ್ನು ಮೋಸಗೊಳಿಸಲು ಹೋಗುತ್ತಿದ್ದಾಗ ಸಿಕ್ಕಿಬಿದ್ದಿದ್ದಾನೆ. ವಾರಂಗಲ್ ಜಿಲ್ಲೆಯ ಸುಬೇದಾರಿ ಮತ್ತು ಜವಾಹರನಗರ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ.
ಆರೋಪಿಯಿಂದ ಮೂರು ಜೊತೆ ಆರ್ಮಿ ಡ್ರೆಸ್, ಆರ್ಮಿ ಕ್ಯಾಪ್, ಆರ್ಮಿ ಬ್ಯಾಡ್ಜ್, ನಕಲಿ ಆರ್ಮಿ ಐಡಿ ಕಾರ್ಡ್, ಆರ್ಮಿ ಡ್ರೆಸ್ನಲ್ಲಿ ತೆಗೆದ ಎರಡು ಫೋಟೋಗಳನ್ನು, ನಕಲಿ ಸ್ನಾತಕೋತ್ತರ ಪದವಿ ಪ್ರಮಾಣಪತ್ರ (ಸಿಎಮ್ಜೆ ವಿಶ್ವವಿದ್ಯಾಲಯ) ನಾಲ್ಕು ಸೆಲ್ ಫೋನ್, ಒಂದು ಮಹೀಂದ್ರಾ ಥಾರ್ ಜೀಪ್, ಒಂದು ಫಾರ್ಚೂನರ್ ಕಾರು ಮತ್ತು ಒಂದು ಮರ್ಸಿಡಿಸ್ ಬೆಂಜ್ ಕಾರು ಸಮತ್ತು ಇತರ ದಾಖಲೆಗಳೊಂದಿಗೆ ಪೊಲೀಸರು ಡಮ್ಮಿ ಪಿಸ್ತೂಲ್ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.