ಬೆಂಗಳೂರು: ಒಬ್ಬ ಸಚಿವರು ದೇವರ ಮೇಲೆ ಭಾರ ಹಾಕುತ್ತಾರೆ. ಮತ್ತೊಬ್ಬರು ಭೇಟಿ ಆದಾದ ದೇವರ ಕಥೆ ಹೇಳುತ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕರ್ನಾಟಕವನ್ನು ದೇವರೇ ಕಾಪಾಡಬೇಕು ಎಂದ ಆರೋಗ್ಯ ಸಚಿವ ಶ್ರೀರಾಮುಲು ಹೇಳಿಕೆಗೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್, ಸಚಿವರ ಹೇಳಿಕೆ ಇಡೀ ರಾಜ್ಯವನ್ನು ತಲ್ಲಣಗೊಳಿಸುತ್ತಿದೆ. ಅಧಿಕಾರ ಬೇಕು ಎಂದು ಬಹಳ ಶ್ರಮಪಟ್ಟು ಅಧಿಕಾರಕ್ಕೆ ಬಂದ ಬಿಜೆಪಿಯವರು ನಮ್ಮಿಂದ ಏನೂ ಮಾಡಲು ಆಗಲ್ಲ ಅಂತ ಹೇಳ್ತಿದ್ದಾರೆ. ಇದು ಶ್ರೀರಾಮುಲು ಅವರ ವೈಯಕ್ತಿಕ ಹೇಳಿಕೆ ಅಲ್ಲ, ಸರ್ಕಾರದ ಸ್ಥಿತಿಯನ್ನು ಸಚಿವರು ಬಹಿರಂಗವಾಗಿ ಹೇಳಿದ್ದಾರೆ. ಕೂಡಲೇ ರಾಜೀನಾಮೆ ನೀಡಿ ರಾಜ್ಯದಲ್ಲಿ ರಾಜ್ಯಪಾಲರ ಆಳ್ವಿಕೆ ಬರಲಿ ಎಂದು ಆಗ್ರಹಿಸಿದ್ದಾರೆ.
ಜನರ ಆರೋಗ್ಯ ರಕ್ಷಣೆ ಮಾಡಲು ನಿಮ್ಮಿಂದ ಸಾಧ್ಯವಾಗಿದಿದ್ರೆ ರಾಜೀನಾಮೆ ನೀಡಿ ಹೊರಡಿ. ರಾಜ್ಯಪಾಲ ಆಳ್ವಿಕೆ ಬರಲಿ. ಒಬ್ಬರು ದೇವರ ಮೇಲೆ ಭಾರ ಹಾಕಿದ್ದಾರೆ. ಇನ್ನೊಬ್ಬರು ಸಭೆಗೆ ಹೋದಾಗೆಲಲ್ಲ ದೇವರ ಕಥೆ ಹೇಳುತ್ತಾರೆ. ಸರ್ಕಾರ ಕೊರೊನಾ ತಡೆಯುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಶ್ರೀರಾಮುಲು ಹೇಳಿದ್ದೇನು?: ಕೊರೊನಾ ನಿಯಂತ್ರಣ ಯಾರ ಕೈಯಲ್ಲಿದೆ ಹೇಳಿ?, ಇಂದು ಭಗವಂತ ಒಬ್ಬನೇ ಕೊರೊನಾ ಸೋಂಕಿನಿಂದ ನಮ್ಮನ್ನು ಕಾಪಾಡಬೇಕು. ಇಲ್ಲವಾದಲ್ಲಿ ಜನರಲ್ಲಿ ಕೊರೊನಾ ಬಗ್ಗೆ ಜಾಗೃತಿ ಬರಬೇಕು. ಕಾಂಗ್ರೆಸ್ ಪಕ್ಷದ ನಾಯಕರು ಕೆಳಮಟ್ಟದ ರಾಜಕಾರಣ ಬಿಡಬೇಕು. ನಾವೇನಾದರು ತಪ್ಪು ಮಾಡಿದ್ದರೆ ಶಿಕ್ಷೆಗೆ ಸಿದ್ಧವಾಗಿದ್ದೇವೆ. ಸಂದಿಗ್ಧ ಸಮಯದಲ್ಲಿ ಕಾಂಗ್ರೆಸ್ ನಾಯಕರು ಯಾವುದೇ ಮಾತಾಡುವ ವೇಳೆ ಎಲ್ಲವನ್ನೂ ಬಿಗಿಹಿಡಿದು ಮಾತಾಡಬೇಕು ಎಂದು ಶ್ರೀರಾಮುಲು ಕೆಪಿಸಿಸಿ ಅಧ್ಯಕ್ಷ ಡಿಕೆಶಿಗೆ ವಾರ್ನಿಂಗ್ ನೀಡಿದರು.