ಬೆಂಗಳೂರು: ಒನ್ ಟೇಕ್ ಆರ್ಟಿಸ್ಟ್ ಚೆನ್ನಾಗಿ ಮಾತನಾಡಿದ್ದಾರೆ. ನಮ್ಮ ಕಲಾವಿದರಿಗೆ ಬುದ್ಧಿ ಇಲ್ಲಾ ಹತ್ತು ಟೇಕ್ ತೆಗೆದುಕೊಳ್ತಾರೆ. ಇವರು ಒಂದೇ ಟೇಕ್ ತೆಗೆದುಕೊಂಡಿದ್ದಾರೆ ಎಂದು ಮುನಿರತ್ನ ಹೇಳಿದ್ದಾರೆ.
ಡಿ.ಕೆ ರವಿ ವಿರುದ್ಧ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ ಅವರು, 10 ದಿನದ ಹಿಂದೆ ಜಗಲಿ ಮೇಲೆ ಕುಳಿತು ಏನೋ ಮಾತನಾಡಿದ್ದರು. ಈಗ 3.5 ಲಕ್ಷದ ಸೋಫಾ ಮೇಲೆ ಕುಳಿತು ಮಾತನಾಡಿದ್ದಾರೆ. ಒಂದೇ ಟೇಕ್ ನಲ್ಲಿ ಹೇಳಿ ಮುಗಿಸಿದ್ದಾರೆ ಎಂದರು.
ಇದೇ ವೇಳೆ ಚುನಾವಣೆಯ ಬಗ್ಗೆ ಮಾತನಾಡಿದ ಮುನಿರತ್ನ, ಕೊರೊನಾ ಸಮಯದಲ್ಲಿ ಶೇ.45 ರಷ್ಟು ಮತದಾನವಾಗಿರೋದು ಒಳ್ಳೆಯ ಮತದಾನ. ಕಳೆದ ಬಾರಿಗಿಂತ ಶೇ.7 ರಷ್ಟು ಮತದಾನ ಕಡಿಮೆಯಾಗಿದೆ. ಕಡಿಮೆ ಮತದಾನವಾಗಿ ಯಾರಿಗೆ ಲಾಭ ಅನ್ನೋ ಪ್ರಶ್ನೆ ಬರಲ್ಲ ಎಂದು ತಿಳಿಸಿದರು.
ಕಳೆದ 134 ವರ್ಷಗಳಿಂದ ಅದನ್ನೇ ಹೇಳಿಕೊಂಡು ಬರ್ತಿದ್ದಾರೆ. ಕಡಿಮೆ ಪರ್ಸೆಂಟೆಜ್ ಆದರೆ ನಮಗೆ ಲಾಭ ಅಂತ ಹೇಳ್ತಾ ಬರುತ್ತಿದ್ದಾರೆ. ಆದರೆ ಜನರು ತುಂಬಾ ಬುದ್ಧಿವಂರಿದ್ದಾರೆ. ಶೇ.20 ಆಗ್ಲಿ ಶೇ.30 ಆಗಲಿ ಅಭಿವೃದ್ಧಿ ಮಾಡಿದವರಿಗೆ ಜನರು ವೋಟ್ ಹಾಕ್ತಾರೆ. ಕಡಿಮೆ ಮತದಾನವಾದ್ರೆ ನಮಗೆ ಲಾಭ ಅಗುತ್ತೆ ಅನ್ನೋದನ್ನ ಬಿಟ್ಟು ಮುಂದೆ ಜನರ ಜೊತೆ ಯಾವ ರೀತಿ ಬೆರೆಯಬೇಕು ಎಂಬುದು ಚಿಂತೆ ಮಾಡಿದ್ರೆ ಕಾಂಗ್ರೆಸ್ ಉಳಿಯುತ್ತೆ ಎಂದು ವಾಗ್ದಾಳಿ ನಡೆಸಿದರು.
50 ಸಾವಿರ ಮತಗಳಿಂದ ಮುನಿರತ್ನ ಗೆಲ್ತಾರೆ ಎಂಬ ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಿ, ಅದು ಯಡಿಯೂರಪ್ಪನವರ ಹಿರಿತನದ ಆಧಾರದಲ್ಲಿ ಹೇಳಿದ್ದಾರೆ. ನಾನು ಮತದಾರರಲ್ಲಿ ಮತಭಿಕ್ಷೆ ಕೇಳಿದ್ದೇನೆ. ಎಷ್ಟು ಮತಗಳಿಂದ ಗೆಲ್ಲುತ್ತೇನೆ ಅನ್ನೋದನ್ನ ಈಗ ಹೇಳೋದಿಲ್ಲ. ಯಡಿಯೂರಪ್ಪ ಕೊಟ್ಟ ಮಾತು ತಪ್ಪೋದಿಲ್ಲ. ಇದು ಸೂರ್ಯಚಂದ್ರ ಇರೋವರೆಗೂ ಸತ್ಯ. ಆ ಮಾತು ಪ್ರಕಾರ ಈಗಾಗಲೇ ಎಲ್ಲರನ್ನೂ ಸಚಿವರನ್ನಾಗಿ ಮಾಡಿದ್ದಾರೆ. ನನ್ನ ಕರ್ತವ್ಯ ಮಾತು ಕೊಟ್ಟಂತೆ ಮಂತ್ರಿ ಮಾಡ್ತೀನಿ ಅಂತ ನನಗೂ ಹೇಳಿದ್ದಾರೆ ಎಂದರು.
ಸಚಿವ ಸ್ಥಾನ ನೀಡುವ ಬಗ್ಗೆ ನಾನು ಈಗಲೇ ನಾನು ಏನು ಹೇಳುದಿಲ್ಲ. ಮುಂದಿನ ಭವಿಷ್ಯ ಏನು ಅನ್ನೋದು ಯಾರಿಗೆ ಗೊತ್ತಿಲ್ಲ. ಅದಕ್ಕೆ ಕಾಲವೇ ಉತ್ತರ ಕೊಡುತ್ತೆ ಎಂದು ತಿಳಿಸಿದರು.