ಧಾರವಾಡ: ಜಿಲ್ಲೆಯ ಅಳ್ನಾವರ ತಾಲೂಕಿನ ಹುಲ್ಲಿಕೆರೆ ಗ್ರಾಮದ ಇಂದಿರಮ್ಮನ ಕೆರೆ ತುಂಬಿದ್ದು, ಭಾರೀ ನೀರು ಸಂಗ್ರಹವಾಗಿದೆ. ಅಲ್ಲದೆ ಕೆರೆಯ ತಡೆಗೋಡೆ ಒಡೆದಿದ್ದರಿಂದ ನೀರು ಅಳ್ನಾವರ ಪಟ್ಟಣಕ್ಕೆ ಹರಿದು ಬರುತ್ತಿದೆ. ಈ ಹಿನ್ನೆಲೆ ಪಟ್ಟಣದ ತಿಲಕನಗರ, ದೇಸಾಯಿ ಚಾಳ್, ಕಾಳೆ ಪ್ಲಾಟ್ ಜನರನ್ನು ಅಳ್ನಾವರ ತಾಲೂಕಾ ಆಡಳಿತ ಸ್ಥಳಾಂತರಿಸುತ್ತಿದೆ.
ಮನೆ ಖಾಲಿ ಮಾಡಿಸುತ್ತಿದ್ದು, ಜನರನ್ನು ಪರಿಹಾರ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗುತ್ತಿದೆ. ಕೆರೆಯ ಪಕ್ಕದ ಗ್ರಾಮಸ್ಥರು ಭಯಭೀತರಾಗಿದ್ದು, ಸಾಕಷ್ಟು ಬೆಳೆ ಸಹ ನಾಶವಾಗಿದೆ.
ಸದ್ಯ ಅಳ್ನಾವರ ಪಟ್ಟಣಕ್ಕೆ ಭೇಟಿ ನೀಡಿದ ಉಪವಿಭಾಗಾಧಿಕಾರಿ ಗೋಪಾಲ ಕೃಷ್ಣ ಹಾಗೂ ಅಳ್ನಾವರ ತಹಶೀಲ್ದಾರ್ ಅಮರೇಶ ಪಮ್ಮಾರ್, ಡವಗಿ ನಾಕಾ ಪರಿಶೀಲನೆ ನಡೆಸಿದರು. ಜನರ ಸ್ಥಳಾಂತರಕ್ಕೆ 6 ಪರಿಹಾರ ಕೇಂದ್ರ ತೆರೆಯಲಾಗಿದೆ. ಜನರನ್ನು ಸ್ಥಳಾಂತರ ಮಾಡುವ ಕೆಲಸ ನಡೆದಿದೆ ಎಂದು ಗೋಪಾಲಕೃಷ್ಣ ತಿಳಿಸಿದರು.