ಜೈಪುರ್: ಒಂದೇ ಹುಡುಗಿಯನ್ನು ಪ್ರೀತಿಸುತ್ತಿದ್ದ ಸಹೋದರರಿಬ್ಬರು ಚಲಿಸುವ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಜಸ್ಥಾನದ ಗುಡ್ಲಾ ಪ್ರದೇಶದ ಬಳಿ ನಡೆದಿದೆ.
ಮೃತರನ್ನು ಮಹೇಂದ್ರ ಗುರ್ಜಾರ್(23) ಹಗೂ ದೇವರಾಜ್ ಗುರ್ಜಾರ್(23) ಎಂದು ಗುರುತಿಸಲಾಗಿದೆ. ಕೇಶವರಪುರ ನಿವಾಸಿಗಳಾದ ಈ ಇಬ್ಬರು ಯುವಕರು ಒಂದೇ ಹುಡುಗಿಯನ್ನು ಪ್ರೀತಿಸಿ ಪ್ರಾಣ ಕಳೆದುಕೊಂಡಿದ್ದಾರೆ. ಈ ಪ್ರಕರಣ ಡಬ್ಲಾನಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಈ ಇಬ್ಬರು ಸಹೋದರರು ಒಂದೇ ಹುಡುಗಿಯನ್ನು ಪ್ರೀತಿಸುತ್ತಿದ್ದರು. ನಮ್ಮಿಬ್ಬರ ಸಾವಿಗೆ ಯಾರು ಕಾರಣರಲ್ಲ. ನಮ್ಮ ಸಾವಿನ ಕುರಿತಾಗಿ ಯಾವುದೇ ಗೊಂದಲ ಮೂಡುವುದು ಬೇಡ. ನೀವು ಮೊದಲಿನಂತೆ ಎಲ್ಲರೂ ಚೆನ್ನಾಗಿರಿ. ನಾವಿಬ್ಬರು ಪ್ರಿತಿಸುತ್ತಿದ್ದ ಹುಡುಗಿಗೆ ಒಳ್ಳೆ ಸಂಬಂಧವನ್ನು ನೋಡಿ ವಿವಾಹವಾಗುವಂತೆ ಹೇಳಿ. ಯಾರ ಒತ್ತಡದಿಂದ ನಾವು ಈ ನಿರ್ಧಾರ ತೆಗೆದುಕೊಳ್ಳುತ್ತಿಲ್ಲ. ಈ ನಿರ್ಧಾರವನ್ನು ನಾವಿಬ್ಬರು ವೈಯಕ್ತಿಕವಾಗಿ ಯೋಚಿಸಿ ತೆಗೆದುಕೊಳ್ಳುತ್ತಿದ್ದೇವೆ ಎಂದು ಹೇಳಿ ಆತ್ಮಹತ್ಯೆಗೂ ಮುನ್ನ ವೀಡಿಯೋ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಸಹೋದರರಿಬ್ಬರ ಆತ್ಮಹತ್ಯೆ ಪ್ರಕರಣ ಮೇಲ್ನೋಟಕ್ಕೆ ಖಚಿತವಾಗಿದೆಯಾದರೂ ಸಾವಿಗೆ ಸಂಬಂಧಿಸಿದಂತೆ ಯಾವುದೇ ಪತ್ರ ವಿವರ ಸಿಕ್ಕಿಲ್ಲ. ಈ ಸಂಬಂದ ಪ್ರಕರಣವನ್ನು ದಾಖಲಿಸಿಕೊಂಡು ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.