ಹುಬ್ಬಳ್ಳಿ: ಹುಡುಗಿ ವಿಚಾರವಾಗಿ ಇಬ್ಬರು ಯುವಕರ ನಡುವಿನ ಗಲಾಟೆಯಲ್ಲಿ ಓರ್ವನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿಯ ಉಪನಗರ ಪೊಲೀಸರು ಆರು ಮಂದಿ ಆರೋಪಿಗಳನ್ನ ಬಂಧಿಸುವಲ್ಲಿ ಯಶ್ವಸಿಯಾಗಿದ್ದಾರೆ.
ಲೋಕೇಶ್ ಕಡೇಮನಿ ಕೊಲೆಯಾಗಿದ್ದ ಯುವಕ. ಮಂಗಳವಾರ ಸಂಜೆ ಈ ಘಟನೆ ನಡೆದಿದ್ದು, ಆರೋಪಿಗಳು ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದರು. ಇದೀಗ ಪೊಲೀಸರು ಕೊಲೆಗೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸಿದ್ದಾರೆ.
ಹುಬ್ಬಳ್ಳಿ ವೀರಾಪುರ ಓಣಿಯ ಹುಡುಗಿಯೊಬ್ಬಳ ವಿಚಾರವಾಗಿ ಮೃತ ಲೋಕೇಶ್ ಕಡೇಮನಿ, ಸಾಗರ ದಾಬಡೆ ಹಾಗೂ ಸಹಚರರ ಮಧ್ಯೆ ಗಲಾಟೆ ನಡೆದಿತ್ತು. ಆದರೆ ಮಂಗಳವಾರ ಸಂಜೆ ಹುಬ್ಬಳ್ಳಿಯ ದೇಶಪಾಂಡೆ ನಗರದ ಶ್ರೀಕೃಷ್ಣ ಕಲ್ಯಾಣ ಮಂಟಪದ ಬಳಿ ಸಾಗರ ದಾಬಡೆ ಹಾಗೂ ಸಹಚರರು ಬೈಕಿನಲ್ಲಿ ಆಗಮಿಸಿ ಲೋಕೇಶ್ ಕಡೇಮನಿಗೆ ಚಾಕು ಇರಿದು ಕೊಲೆ ಮಾಡಿದ್ದರು.
ಚಾಕು ಇರಿದು ಕೊಲೆ ಮಾಡಿದ ನಂತರ ಆರೋಪಿಗಳು ಪರಾರಿಯಾಗಿದ್ದರು. ಕೂಡಲೇ ಕೊಲೆ ಆರೋಪಿಗಳಿಗೆ ಕಾರ್ಯಾಚರಣೆ ನಡೆಸಿದ ಉಪನಗರ ಪೊಲೀಸರು ಆರು ಮಂದಿ ಆರೋಪಿಗಳನ್ನ ಬಂಧಿಸುವಲ್ಲಿ ಯಶ್ವಸಿಯಾಗಿದ್ದಾರೆ.
ಸ್ಯಾನಿಟೈಜರ್ ಮಾರಾಟ ಮಾಡುತ್ತಿದ್ದ ಲೋಕೇಶ್ ಕಡೇಮನಿ ಹಲವು ದಿನಗಳಿಂದ ವೀರಾಪುರ ಓಣಿಯ ಹುಡುಗಿಯನ್ನ ಪ್ರೀತಿಸುತ್ತಿದ್ದ. ಈ ವಿಚಾರವಾಗಿ ಕೊಲೆ ಆರೋಪಿ ಹಾಗೂ ಲೋಕೇಶ್ ಮಧ್ಯೆ ಗಲಾಟೆ ನಡೆದಿತ್ತು. ಈ ವಿಚಾರವಾಗಿ ನಿನ್ನೆ ಇಬ್ಬರು ಯುವಕರ ಮಧ್ಯೆ ಗಲಾಟೆ ನಡೆದು, ತ್ರಿಕೋನ ಪ್ರೇಮ ಪ್ರಕರಣ ಕೊಲೆಯಲ್ಲಿ ಅಂತ್ಯವಾಗಿದೆ.
ಈ ಘಟನೆಯ ಕುರಿತು ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣದ ವಿಚಾರಣೆ ಮುಂದುವರಿದಿದೆ.