ಹಾಸನ: ಮಕ್ಕಳನ್ನು ಒಂದು ವರ್ಷ ಶಾಲೆಗೆ ಕಳುಹಿಸುವುದೇ ಬೇಡ. ಒಂದು ವರ್ಷ ಶಾಲೆ ಇಲ್ಲದಿದ್ದರೆ ಏನೂ ಆಗುವುದಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಗೋಪಾಲಸ್ವಾಮಿ ಶಾಲೆ ತೆರೆಯದಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಹಾಸನದಲ್ಲಿ ಮಾತನಾಡಿದ ಅವರು, ಈಗ ಕೊರೊನಾ ಹರಡುತ್ತಿರುವುದನ್ನು ನೋಡಿದರೆ, ಶಾಲೆ ಆರಂಭವಾದರೆ ಪರಿಸ್ಥಿತಿ ಏನಾಗುತ್ತೆ ಎಂಬುದು ಊಹಿಸಲೂ ಸಾಧ್ಯವಿಲ್ಲ. ಹಾಸನ ಜಿಲ್ಲೆಯಲ್ಲೂ ಆಸ್ಪತ್ರೆಗಳು ತುಂಬಿ ಹೋಗುತ್ತಿವೆ. ಹೀಗಾಗಿ ರೋಗ ಲಕ್ಷಣ ಇಲ್ಲದೆ ಪಾಸಿಟಿವ್ ಬರುತ್ತಿರುವವರನ್ನು ಆಯಾ ತಾಲೂಕು ಕೇಂದ್ರದಲ್ಲೇ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಬೇಕು ಎಂದರು.
ಉಸ್ತುವಾರಿ ಸಚಿವರು 15 ದಿನ ಕಳೆದರೂ ಹಾಸನ ಜಿಲ್ಲೆ ಕಡೆ ಬಂದಿಲ್ಲ. ಸಚಿವರು ಜಿಲ್ಲೆಗೆ ಬಂದು ಕೋವಿಡ್-19 ಪರಿಸ್ಥಿತಿಯ ಬಗ್ಗೆ ಗಮನ ಹರಿಸಬೇಕು. ಇಲ್ಲವೆ ತಂತ್ರಜ್ಞಾನ ಬಳಸಿಕೊಂಡು ಜಿಲ್ಲೆಯ ಜನಪ್ರತಿನಿಧಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಕೊರೊನಾ ತಡೆಗಟ್ಟಲು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಬೇಕು ಎಂದರು.
ಬಾಂಬೆಗಿಂತ ನಮಗೆ ಬೆಂಗಳೂರೇ ದೊಡ್ಡ ಸಮಸ್ಯೆಯಾಗಿದೆ. ಹೀಗಾಗಿ ಹಾಸನ ಜಿಲ್ಲೆಯನ್ನು ಲಾಕ್ಡೌನ್ ಮಾಡಬೇಕು ಎಂದು ಮನವಿ ಮಾಡಿದ್ದಾರೆ. ಸರ್ಕಾರ ಆರ್ಥಿಕ ಪರಿಸ್ಥಿತಿ ಇಟ್ಟುಕೊಂಡು ಒದ್ದಾಡುತ್ತಿದೆ. ನಾವು ಬದುಕಿದ್ದರೆ ತಾನೇ ಆರ್ಥಿಕತೆ ಎಂದು ಸರ್ಕಾರದ ತೀರ್ಮಾನಗಳ ವಿರುದ್ಧ ಕಿಡಿಕಾರಿದರು.