– ನನ್ನ ಅಭಿಮಾನಿಗಳಲ್ಲಿ ನನ್ನ ತಾಯಿಯನ್ನ ಕಾಣುತ್ತೇನೆ
ಬೆಂಗಳೂರು: ಸ್ಯಾಂಡಲ್ವುಡ್ ನಟ ದುನಿಯಾ ವಿಜಯ್ರವರು ನನ್ನ ಅಭಿಮಾನಿಗಳಲ್ಲಿ ನನ್ನ ತಾಯಿಯನ್ನ ಕಾಣುತ್ತೇನೆ ಎಂದು ಹೇಳಿದ್ದಾರೆ.
ನಟ ದುನಿಯ ವಿಜಯ್ರವರ ತಾಯಿ ನಾರಾಯಣಮ್ಮ ಗುರುವಾರ ನಿಧನರಾಗಿದ್ದರು. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಾಕಾರಿಯಾಗದೇ ಜುಲೈ 8ರಂದು ಕೊನೆಯುಸಿರೆಳೆದಿದ್ದರು. ಹೀಗಾಗಿ ಗುರುವಾರ ರಾತ್ರಿಯಿಂದಲೇ ಸ್ಯಾಂಡಲ್ವುಡ್ನ ಹಲವು ನಟ-ನಟಿಯರು ಅಂತಿಮ ದರ್ಶನ ಪಡೆದಿದ್ದಾರೆ. ಸದ್ಯ ಇಂದು ಹೊಸಕೆರೆ ಹಳ್ಳಿ ನಿವಾಸದಿಂದ ವಿಜಯ್ ಅವರ ತಂದೆ ಹುಟ್ಟೂರು ಆನೇಕಲ್ ನ ಕುಂಬಾರನಹಳ್ಳಿಗೆ ಪಾರ್ಥಿವ ಶರೀರ ರವಾನೆ ಮಾಡಲಾಗಿದ್ದು, ಮಧ್ಯಾಹ್ನದ ವೇಳೆಗೆ ವಿಜಯ್ ಅವರ ಜಮೀನಿನಲ್ಲಿ ಹಿಂದೂ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನಡೆಸಲಾಗುತ್ತದೆ.
ಈ ಕುರಿತಂತೆ ಮಾಧ್ಯಮಗಳೊಂದಿಗೆ ಮಾತನಾಡಿರುವ ದುನಿಯಾ ವಿಜಯ್ರವರು, ಇಂದು ಹೊಸಕೆರೆಹಳ್ಳಿಯ ತಮ್ಮ ನಿವಾಸದಿಂದ ಆನೆಕಲ್ ನ ಕುಂಬಾರಹಳ್ಳಿಗೆ ತಾಯಿಯ ಪಾರ್ಥಿವ ಶರೀರವನ್ನು ತೆಗೆದುಕೊಂಡು ಹೋಗುತ್ತಿದ್ದೇವೆ. ನಮ್ಮ ಮನೆಯಲ್ಲಿ ಅಮ್ಮ 21 ದಿನಗಳ ಕಾಲ ಮಗು ರೀತಿ ಇದ್ದರು. ಒಂದು ರೀತಿ ನನ್ನ ಮಗನಾ ನಾನು ಕಳ್ಕೊಂಡಿದ್ದೀನಿ ಎಂದು ಅಮ್ಮನ ಅಗಲಿಕೆ ನೋವಲ್ಲಿ ಕಣ್ಣೀರಿಟ್ಟಿದ್ದಾರೆ.
ನಂತರ ನನ್ನ ಅಭಿಮಾನಿಗಳಲ್ಲಿ ನನ್ನ ತಾಯಿಯನ್ನ ಕಾಣುತ್ತೇನೆ. ನಾನು ನಿರ್ದೇಶಿಸಿ, ನಟಿಸಿರುವ ಸಲಗ ಸಿನಿಮಾವನ್ನು ಅವರಿಗೆ ನೋಡುವ ಆಸೆ ಇತ್ತು. ಆದರೆ ಅದು ಈಡೇರಲಿಲ್ಲ ಎಂಬ ನೋವಿದೆ. ಅಮ್ಮನ ಆಸೆಯಂತೆಯೇ ಎಲ್ಲ ನಡೆಯುತ್ತಿದೆ. ಕಾಶಿಯಿಂದ ಗಂಗಾಜಲ ತರಿಸಲಾಗಿತ್ತು, ಅದನ್ನು ಕುಡಿದ ನಂತರವೇ ಅಮ್ಮ ನಮ್ಮನ್ನು ಅಗಲಿದರು. ಅವರ ಇಚ್ಚೆಯಂತೆ ಅವರು ಹೇಳಿದ್ದ ಸ್ಥಳದಲ್ಲಿಯೇ ಅಂತ್ಯ ಕ್ರಿಯೆ ಕೂಡ ಆಗುತ್ತಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ನಟ ದುನಿಯಾ ವಿಜಯ್ಗೆ ಮಾತೃ ವಿಯೋಗ