ಬೆಂಗಳೂರು: ಸಚಿವ ಸ್ಥಾನ ಕೈ ತಪ್ಪಿದ ವಿಚಾರ ತಿಳಿಯುತ್ತಿದ್ದಂತೆಯೇ ಶಾಸಕ ಎಂ.ಪಿ ರೇಣುಕಾಚಾರ್ಯ ಅವರು ಏರ್ ಪೋರ್ಟ್ಗೆ ಆಗಮಿಸಿದ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಎದುರು ಕಣ್ಣೀರು ಹಾಕಿದ್ದಾರೆ.
ಇಂದು ಸಂಜೆ ಏಳು ಮಂದಿ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಅರುಣ್ ಸಿಂಗ್ ಅವರು ಇಂದು ಬೆಂಗಳೂರಿಗೆ ಆಗಮಿಸಿದ್ದಾರೆ. ಅರುಣ್ ಅವರು ಏರ್ ಪೋರ್ಟ್ಗೆ ಆಗಮಿಸುತ್ತಿದ್ದಂತೆಯೇ ರೇಣುಕಾಚಾರ್ಯ ಹೈಡ್ರಾಮಾ ಮಾಡಿದ್ದಾರೆ.
ಸಚಿವರ ಲಿಸ್ಟ್ ನಲ್ಲಿ ತನ್ನ ಹೆಸರು ಇಲ್ಲ. ಈ ಹಿನ್ನೆಲೆಯಿಂದ ನೊಂದ ಶಾಸಕರು, ಅರುಣ್ ಸಿಂಗ್ ಬಳಿ ನನಗೆ ಸಚಿವ ಸ್ಥಾನ ಕೊಡಿಸುವಂತೆ ಕಣ್ಣೀರು ಹಾಕಿ ಬೇಡಿಕೊಂಡಿದ್ದಾರೆ. ದಯಮಾಡಿ ನನಗೆ ಸಚಿವ ಸ್ಥಾನ ಕೊಡಿಸಿ ಎಂದು ಕಾರಿನಲ್ಲಿ ಕುಳಿತಿದ್ದ ಅರುಣ್ ಸಿಂಗ್ ಕೈ ಹಿಡಿದು ಬೇಡಿಕೊಂಡಿದ್ದಾರೆ. ಈ ವೇಳೆ ಅರುಣ್ ಸಿಂಗ್, ತಾಳ್ಮೆ ತಾಳ್ಮೆ ವಹಿಸಿ ಎಂದು ಹೇಳಿ ಅಲ್ಲಿಂದ ಹೊರಟಿದ್ದಾರೆ. ಇದನ್ನೂ ಓದಿ: ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ ರೇಣುಕಾಚಾರ್ಯ ಕಣ್ಣೀರು
ನಗರದಲ್ಲಿ ಸುದ್ದಿಗಾರರೊಂದಿಗೆ ಮಾನಾಡಿದ ಸಿಎಂ, ಇಂದು 7 ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಉಮೇಶ್ ಕತ್ತಿ, ಅರವಿಂದ್ ಲಿಂಬಾವಳಿ, ಎಂಟಿಬಿ ನಾಗರಾಜ್, ಮುರುಗೇಶ್ ನಿರಾಣಿ, ಆರ್ ಶಂಕರ್, ಸಿ.ಪಿ ಯೋಗೇಶ್ವರ್ ಹಾಗೂ ಎಸ್. ಅಂಗಾರ ಇಂದು ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡುತ್ತಾರೆ ಎಂದು ತಿಳಿಸಿದ್ದಾರೆ. ಈ ಮೂಲಕ ಶಾಸಕ ಮುನಿರತ್ನ ಅವರಿಗೂ ಸಚಿವ ಸ್ಥಾನ ಕೈ ತಪ್ಪಿದ್ದು, ಸಿಎಂ ವಚನ ಭ್ರಷ್ಟರಾದ್ರಾ ಎಂದು ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.