– ಕತ್ತು ಹಿಸುಕಿ, ಪಾಳು ಬಾವಿಗೆ ಎಸೆದು ಎಲ್ಲರೆದ್ರು ಕಣ್ಣೀರಿಟ್ಟ ಮಹಿಳೆ
ರಾಂಚಿ: ಅಕ್ರಮ ಸಂಬಂಧ ನೋಡಿದ ಬಾಲಕನನ್ನು ಕೊಲೆ ಮಾಡಿರುವ ಘಟನೆ ಜಾರ್ಖಂಡ್ ರಾಜ್ಯದ ಗೊಡ್ಡಾ ಜಿಲ್ಲೆಯ ಮೆಹರಾಮ್ ವ್ಯಾಪ್ತಿಯ ಸಿಮಾನಪುರಿ ಗ್ರಾಮದಲ್ಲಿ ನಡೆದಿದೆ.
ಮಹಿಳೆ ಪತಿಯ ಚಿಕ್ಕಪ್ಪನ ಮಗನ ಜೊತೆಯಲ್ಲಿಯೇ ಅಕ್ರಮ ಸಂಬಂಧ ಹೊಂದಿದ್ದಳು. ಮನೆಯಲ್ಲಿ ಯಾರಿಗೂ ತಿಳಿಯದಂತೆ ಅತ್ತಿಗೆ-ಮೈದುನ ಕಳ್ಳಾಟ ನಡೆದಿತ್ತು. ಕೆಲ ದಿನಗಳ ಹಿಂದೆ ಮನೆಗೆ ಬಂದಿದ್ದ ನಾದಿನಿಯ ಮಗ ಇಬ್ಬರ ಸಂಬಂಧವನ್ನ ನೋಡಿದ್ದನು. ಇದರಿಂದ ಭಯಗೊಂಡ ಮಹಿಳೆ ಪತಿಗೆ ವಿಷಯ ಗೊತ್ತಾದ್ರೆ ಹೇಗೆ ಅಂತ ಬಾಲಕನನ್ನ ಕೊಲ್ಲಲು ಮೈದುನನ ಜೊತೆ ಪ್ಲಾನ್ ಮಾಡಿದ್ದಳು.
ಇಬ್ಬರು ಉಪಾಯದಿಂದ ಬಾಲಕನನ್ನು ಕೋಣೆಯೊಳಗೆ ಕರೆದಿದ್ದಾರೆ. ಬಾಲಕ ಒಳ ಬರುತ್ತಿದ್ದಂತೆ ಬಾಗಿಲು ಹಾಕಿ ಕತ್ತು ಹಿಸುಕಿ ಕೊಂದು ಶವವನ್ನ ಗ್ರಾಮದ ಹೊರವಲಯದಲ್ಲಿರುವ ಪಾಳು ಬಾವಿಗೆ ಎಸೆದು ಏನು ತಿಳಿಯದಂತೆ ಮನೆ ಸೇರಿಕೊಂಡಿದ್ದಾರೆ. ಬಾಲಕ ಕಾಣದಿದ್ದಾಗ ಕುಟುಂಬದ ಇತರೆ ಸದಸ್ಯರು ಗ್ರಾಮದ ತುಂಬೆಲ್ಲ ಹುಡುಕಾಡಿದ್ದಾರೆ. ಬಾಲಕ ಸಿಗದಿದ್ದಾಗ ಬೆಲಬಡ್ಡಾ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಇತ್ತ ಅನುಮಾನ ಬಾರದಿರಲಿ ಅಂತ ಮಹಿಳೆ ಕುಟುಂಬದ ಇತರೆ ಜೊತೆ ಸೇರಿ ಮೊಸಳೆ ಕಣ್ಣೀರು ಹಾಕಿದ್ದಾಳೆ.
ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಗ್ರಾಮಕ್ಕೆ ಆಗಮಿಸಿ ತನಿಖೆ ಆರಂಭಿಸಿದ್ದರು. ಆರಂಭದಲ್ಲಿಯೇ ಪೊಲೀಸರಿಗೆ ಮಹಿಳೆ ಮೇಲೆ ಅನುಮಾನ ಬಂದು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಾಳೆ. ಬಾಲಕನ ಶವವನ್ನ ಬಾವಿಯಿಂದ ತೆಗೆದು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿ, ಇಬ್ಬರನ್ನ ಪೊಲೀಸರು ಬಂಧಿಸಿದ್ದಾರೆ.