ಬೆಂಗಳೂರು: ವಿಧಾನಪರಿಷತ್ ಉಪಸಭಾಪತಿ ಎಸ್.ಎಲ್ ಧರ್ಮೇಗೌಡರ ನಿಧನ ವೈಯಕ್ತಿಕವಾಗಿ ನನಗೆ ಜೀವನದಲ್ಲಿ ಅಂತ್ಯಂತ ಘೋರವಾದ ಘಟನೆ. ನನ್ನ ರಾಜಕೀಯ ಕೊನೆ ಘಟ್ಟದಲ್ಲಿ ಎಂದೂ ಮರೆಯಲಾಗದ ನೋವು ಇದು ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಕಣ್ಣೀರಿಟ್ಟಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧರ್ಮೇಗೌಡರ ತಂದೆ ಲಕ್ಷ್ಮಯ್ಯ ಕಾಲದಿಂದಲೂ ನನಗೂ ಮತ್ತು ಅವರ ಕುಟುಂಬಕ್ಕೂ ಬಾಂಧವ್ಯ ಇತ್ತು. ಧರ್ಮೇಗೌಡರು ತಂದೆಯ ಹೆಸರು ಉಳಿಸುವ ಕೆಲಸ ಮಾಡಿದ್ದರು. ಪಂಚಾಯ್ತಿಯಿಂದ ಹಿಡಿದು ಬ್ಯಾಂಕ್ ಕ್ಷೇತ್ರ, ರಾಜಕೀಯದಲ್ಲಿ ಶಾಸಕರಾಗಿ, ಉಪ ಸಭಾಪತಿಯಾಗಿ, ವಿಪಕ್ಷ ನಾಯಕರಾಗಿ ಕೆಲಸ ಮಾಡಿದ್ದಾರೆ. ಕೊನೆಯ ಕಾಲದಲ್ಲಿ ಆದ ಘಟನೆಯಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಧರ್ಮೇಗೌಡರನ್ನು ನೆನೆದು ಭಾವುಕರಾದರು.
ನನ್ನ ರಾಜಕೀಯ ಕೊನೆ ಘಟ್ಟದಲ್ಲಿ ಎಂದೂ ಮರೆಯಲಾಗದ ನೋವು ಇದಾಗಿದೆ. ಅತ್ಯಂತ ಸೂಕ್ಷ್ಮ ವ್ಯಕ್ತಿತ್ವದವರನ್ನು ಕಳೆದುಕೊಂಡಿದ್ದೇವೆ. ತನ್ನ ನೋವು ಯಾರಿಗೂ ಹೇಳದೆ ಹೆಂಡತಿ, ಮಕ್ಕಳಿಗೆ ಪತ್ರ ಬರೆದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಅವರ ಆಶಯದಂತೆ ಅವರ ಕುಟುಂಬ ಮುಂದೆ ಕೆಲಸ ಮಾಡಲಿ. ಧರ್ಮೇಗೌಡರ ಹೆಸರು ಉಳಿಸುವ ಕೆಲಸ ಕುಟುಂಬ ಮಾಡುವಂತಾಗಲಿ. ನಾನು ಅಂತ್ಯ ಸಂಸ್ಕಾರಕ್ಕೆ ಹೋಗುತ್ತೇನೆ ಎಂದು ಹೇಳಿದರು.
ಪರಿಷತ್ ಘಟನೆ ಆದ ಬಳಿಕ ಬೆಳಗ್ಗೆ ಬಂದು ನನ್ನ ಬಳಿ ಮಾತನಾಡಿದ್ದರು. ನಾನು ಅವರಿಗೆ ಸಲಹೆ ಕೊಟ್ಟಿದ್ದೆ. ಯಾವುದೇ ಕಾರಣಕ್ಕೂ ಸಭಾಪತಿ ಸ್ಥಾನಕ್ಕೆ ನಿಮ್ಮನ್ನ ಕರೆದು ಕೂರಿಸಿದಾಗ ಬಂದು ಕೂರಬೇಕು ಅಂತ ಹೇಳಿದ್ದೆ. ನನ್ನ ಸಲಹೆ ಪಾಲಿಸಲು ನಾನು ಹೇಳಿದ್ದೆ ಎಂದರು.