ಕಲಬುರಗಿ: ಜಿಲ್ಲೆಯ ಎಸ್ಪಿ ಸಿಮಿ ಮರಿಯಮ್ ಜಾರ್ಜ್ ಹೆಸರಲ್ಲಿ ಪಿಎಸ್ಐ ಬಳಿ ಹಣ ಪಡೆದು ವಂಚನೆ ಮಾಡಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ.
ಜಿಲ್ಲೆಯ ಜೇವರ್ಗಿ ಪೊಲೀಸ್ ಠಾಣೆಯ ಪಿಎಸ್ಐ ಮಂಜುನಾಥ್ ಹೂಗಾರಗೆ ಜೇವರ್ಗಿ ತಾಲೂಕಿನ ಕೊಂಡಗುಳಿ ಗ್ರಾಮದ ಖಾಸಿಂ ಪಟೇಲ್ ಕೆಲ ತಿಂಗಳ ಹಿಂದೆ ಪರಿಚಯ ಮಾಡಿಕೊಂಡಿದ್ದು, ನನಗೆ ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ರಾಜಕೀಯ ನಾಯಕರ ಎಲ್ಲರೊಂದಿಗೆ ಒಳ್ಳೆಯ ಒಡನಾಟವಿದೆ ಅಂತ ಪಿಎಸ್ಐಗೆ ವಂಚಕ ಹೇಳಿದ್ದಾನೆ. ವಂಚಕನ ಜಾಲಕ್ಕೆ ಬಿದ್ದ ಪಿಎಸ್ಐ ಹೂಗಾರ ನಿಜಕ್ಕೂ ಈತ ಒಳ್ಳೆಯ ಪ್ರೊಫೈಲ್ ವ್ಯಕ್ತಿ ಎಂದು ನಂಬಿ ಸ್ನೇಹ ಬೆಳೆಸಿಕೊಂಡಿದ್ದಾರೆ.
ಇದನ್ನೇ ಎನ್ಕ್ಯಾಶ್ ಮಾಡಿಕೊಂಡ ವಂಚಕ ಖಾಸಿಂ, ಕೆಲ ದಿನಗಳ ನಂತರ ಕಾನೂನು ಸುವ್ಯವಸ್ಥೆಯಲ್ಲಿ ತೊಡಕು ಉಂಟಾದ್ರೆ ಎಸ್ಪಿ ಮೇಡಂಗೇ ಹೇಳಿ ಬಗೆಹರಿಸೋದಾಗಿ ನಂಬಿಸಿದ್ದಾನೆ. ಎಸ್ಪಿ ಸಿಮಿ ಮರಿಯಮ್ ಜಾರ್ಜ್ ಅವರ ಡಿಪಿಯನ್ನು ಇಟ್ಟು ಎಸ್ಪಿ ಮೇಡಂ ಅವರು ಕೆಲವೇ ಕೆಲವು ಜನರಿಗೆ ಅವರ ನಂಬರ್ ನೀಡಿದ್ದಾರೆ. ಅದರಲ್ಲಿ ನಾನು ಸಹ ಒಬ್ಬನಾಗಿದ್ದೆನೆ. ನಿಮ್ಮ ಬಳಿ ಸಹ ಈ ನಂಬರ್ ಇರಲಿ. ಆದರೆ ಯಾವುದೇ ಕಾರಣಕ್ಕು ಅವರಿಗೆ ಕಾಲ್ ಮಾಡಬೇಡಿ, ಏನೇ ಸಮಸ್ಯೆಯಾದ್ರೆ ಬರೀ ವಾಟ್ಸಪ್ ಅಂತ ಹೇಳಿದ್ದಾನೆ.
ಕೆಲ ದಿನಗಳ ನಂತರ ಎಸ್ಎಂಜಿ ನಂಬರ್ ನಿಂದ ತುರ್ತಾಗಿ ಹಣ ಬೇಕಾಗಿದೆ ಅಂತ ಪಿಎಸ್ಐ ಕಡೆಯಿಂದ 2.5 ಲಕ್ಷ ಪಡೆದಿದ್ದಾನೆ. ನಂತರ ಕೆಲ ದಿನಗಳ ಬಳಿಕ ಮತ್ತೆ 6 ಲಕ್ಷ ಹಣ ಪಡೆದಿದ್ದಾನೆ.
ಪಿಎಸ್ಐ ಹಣ ನೀಡಿದ್ದು ಯಾಕೆ..?
ವಂಚಕ ಖಾಸೀಂ ತನ್ನ ಪರ್ಸನಲ್ ನಂಬರನ್ನೇ ಎಸ್ಪಿ ಅವರ ಮೊಬೈಲ್ ನಂಬರ್ ಅಂತ ನಂಬಿಸಿ ಬಿಟ್ಟಿದ್ದ. ಅದಾದ ಬಳಿಕ ನಮ್ಮ ತಂದೆಯವರಿಗೆ ಕೇರಳದಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತುರ್ತು ಹಣ ಬೇಕು ಅಂತ ವಾಟ್ಸಪ್ ಮೇಸೆಜ್ ಕಳುಹಿಸಿದ್ದಾನೆ. ಈ ವೇಳೆ ಮಂಜುನಾಥ ಹೂಗಾರ ಅವರು ಎಸ್ಪಿ ಅವರಿಗೆ ಹಣದ ಅವಶ್ಯಕತೆ ಇದೆ ಅಂತ ಮೊದಲಿಗೆ ತನ್ನ ಸ್ನೇಹಿತನಿಂದ ಎರಡೂವರೆ ಲಕ್ಷ ಸಾಲ ಪಡೆದಿದ್ದರು. ನಂತರ 6 ಲಕ್ಷ ಹಣ ಬೇಕು ಅಂತ ಎರಡನೇ ಬಾರಿ ವಾಟ್ಸಪ್ ಮೆಸೇಜ್ ಬಂದಾಗ ಪಿಎಸ್ಐ ಹೂಗಾರ ತನ್ನ ಸ್ಟೇಷನ್ ಬಜಾರ್ ವ್ಯಾಪ್ತಿಯ ಎಸ್ಬಿಐ ಬ್ಯಾಂಕಿನಲ್ಲಿಟ್ಟ ಫಿಕ್ಸ್ಡ್ ಡೆಪಾಸಿಟ್ ಹಣವನ್ನು ಕ್ಯಾನ್ಸಲ್ ಮಾಡಿಸಿ ಆರೋಪಿಗೆ ನೀಡಿದ್ದಾರೆ.
ಪ್ರಕರಣ ಬೆಳಕಿಗೆ: ಎರಡು ದಿನದ ಹಿಂದೆ ಅದೇ ನಂಬರ್ ನಿಂದ ಪಿಎಸ್ಐಗೆ ಒಂದು ವಾಟ್ಸಪ್ ವಾಯ್ಸ್ ಕಾಲ್ ಬಂದಿದ್ದು, ವಾಯ್ಸ್ ಕಾಲ್ ನಲ್ಲಿ ಉರ್ದು ಮಿಶ್ರಿತ ಹಿಂದಿ ಭಾಷೆಯಲ್ಲಿ ಹೆಣ್ಣು ಮಕ್ಕಳು ಮಾತಾಡಿರುವ ಧ್ವನಿ ಕೇಳಿ ಅನುಮಾನ ಬಂದಿದೆ. ಈ ಹಿನ್ನೆಲೆ ಪಿಎಸ್ಐ ಅವರು ವಂಚಕ ಖಾಸಿಂ ಪಟೇಲ್ ಮೇಲೆ ಅನುಮಾನ ಬಂದು ಎಸ್ಪಿ ಅವರನ್ನು ಸಂಪರ್ಕಿಸಿದ್ದಾರೆ. ಅದು ನನ್ನ ನಂಬರ್ ಅಲ್ಲ ನಿಮಗೆ ಮೋಸ ಮಾಡಿದ್ದಾನೆ ಹೋಗಿ ಪ್ರಕರಣ ದಾಖಲಿಸಿ ಎಂದು ಎಸ್ಪಿ ಸೂಚನೆ ನೀಡಿದ್ದಾರೆ.
ಹೀಗಾಗಿ ಕಲಬುರಗಿ ನಗರದ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ವಂಚಕನ ವಿರುದ್ಧ ಪಿಎಸ್ಐ ಮಂಜುನಾಥ್ ಹೂಗಾರ ದೂರು ಸಲ್ಲಿಸಿದ್ದಾರೆ. ಸದ್ಯ ಆರೋಪಿಯನ್ನು ಸ್ಟೇಷನ್ ಬಜಾರ್ ಪೊಲೀಸರು ಆರೋಪಿ ಖಾಸಿಂ ಪಟೇಲ್ ಬಂಧಿಸಿದ್ದು, ಬಂಧಿತನಿಂದ 2 ಲಕ್ಷ ಹಣ ವಶಪಡಿಸಿಕೊಂಡಿದ್ದಾರೆ.