ಕಲಬುರಗಿ : ಎಸ್ಟಿ ಪ್ರಮಾಣ ಪತ್ರ ಸಿಗದೆ ಇದ್ದಕ್ಕಾಗಿ ಮನನೊಂದ ವ್ಯಕ್ತಿಯೊಬ್ಬ ಅಫಜಲಪೂರ ತಹಶೀಲ್ದಾರ್ ಕಛೇರಿ ಮುಂದೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ.
ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯನ್ನು ಶರಣಪ್ಪ ದಿವಾಣಜಿ ಎಂದು ಗುರುತಿಸಲಾಗಿದೆ. ಈತ ಅಫಜಲಪೂರ ತಾಲೂಕಿನ ಗೌರ ಬಿ ಗ್ರಾಮದವನಾಗಿದ್ದಾರೆ. ಎಸ್ಟಿ ಪ್ರಮಾಣ ಪತ್ರಕ್ಕಾಗಿ ಕೋಲಿ ಸಮಾಜದ ಶರಣಪ್ಪ ದಿವಾಣಜಿ ಅರ್ಜಿ ಸಲ್ಲಿಸಿದ್ದರು. ಪ್ರಮಾಣ ಪತ್ರ ನೀಡದ್ದಕ್ಕೆ ತಹಶೀಲ್ದಾರ್ ಕಛೇರಿ ಎದುರು ಪ್ರತಿಭಟನೆ ಮಾಡಿದ್ದಾರೆ.
ಶರಣಪ್ಪ ಪತ್ನಿಗೆ ಗ್ರಾಮ ಪಂಚಾಯತಿ ಚುನಾವಣೆಗೆ ನಿಲ್ಲಿಸಲು ಸಿದ್ಧತೆ ಮಾಡಿಕೊಂಡಿದ್ದನು. ಎಸ್ಟಿ ಮೀಸಲು ವಾರ್ಡ್ನಿಂದ ಸ್ಪರ್ಧೆ ಬಯಸಿದ್ದ ಶರಣಪ್ಪ ಎಸ್ಟಿ ಪ್ರಮಾಣ ಪತ್ರ ಸಿಗದಿದ್ದಾಗ ತಹಶೀಲ್ದಾರ್ ಕಛೇರಿ ಮುಂದೆ ಕೋಲಿ ಸಮಾಜದವರ ಪ್ರತಿಭಟನೆ ಮಾಡಿದ್ದಾರೆ. ಈ ವೇಳೆ ಶರಣಪ್ಪ ಇದ್ದಕ್ಕಿದ್ದಂತೆಯೇ ವಿಷ ಸೇವಿಸಿದ್ದಾರೆ. ಪೊಲೀಸರು ಕೂಡಲೇ ಶರಣಪ್ಪರನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.