ಕೊಪ್ಪಳ: ಯಾವುದೇ ಕಾರಣಕ್ಕೂ 10ನೇ ತರಗತಿ ಮತ್ತು 12ನೇ ತರಗತಿಯ ಪರೀಕ್ಷೆಗಳು ರದ್ದು ಪಡಿಸಬಾರದು ಎಂದು ಶಾಸಕ ಅಮರೇಗೌಡ ಬಯ್ಯಾಪೂರರವರು ಒತ್ತಾಯಿಸಿದ್ದಾರೆ.
ಕೊಪ್ಪಳದ ಕುಷ್ಟಗಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಪಿಯುಸಿ ಕಾಲೇಜ್ ಪ್ರಾಚಾರ್ಯರು ಮತ್ತು ಪ್ರೌಢ ಶಾಲಾ ಶಿಕ್ಷಕರೊಂದಿಗೆ ಮತ್ತು ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದೆ. ಅದರಂತೆ ಮಕ್ಕಳು ಕೂಡ ಪರೀಕ್ಷೆ ಬರೆಯಲು ಉತ್ಸುಕರಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಪರೀಕ್ಷೆ ರದ್ದು ಪಡಿಸುವುದು ಸರಿಯಲ್ಲ ಎಂದಿದ್ದಾರೆ.
ಎಸ್ಎಸ್ಎಲ್ಸಿ ಮತ್ತು ಪಿಯುಸಿ ಪರೀಕ್ಷೆ ಉತ್ತೀರ್ಣರಾಗಿದ್ದೇವೆ ಎಂದು ಮಕ್ಕಳು ನೌಕರಿ ಸೇರುವ ಅವಕಾಶ ಇದೆ. ಆದರೆ ಪರೀಕ್ಷೆ ರದ್ದುಗೊಳಿಸಿ ಕೇವಲ ಗ್ರೇಡ್ ನೀಡಿದರೆ, ಅವರಿಗೆ ಸರಿಯಾದ ಅಂಕಗಳು ಸಿಗದೇ ನೌಕರಿಯಿಂದ ವಂಚಿತಗೊಳ್ಳುವ ಸಾಧ್ಯತೆಯಿದೆ ಎಂಬ ಆತಂಕವನ್ನು ಹೊರ ಹಾಕಿದ್ದಾರೆ.
ಕೇಂದ್ರ ಸರ್ಕಾರ ಸಿಬಿಎಸ್ಸಿ 12 ತರಗತಿ ಪರೀಕ್ಷೆಗಳು ರದ್ದುಗೊಳಿಸಿದ್ದರ ಬಗ್ಗೆ ವಿರೋಧ ವ್ಯಕ್ತಪಡಿಸಿದ ಅಮರೇಗೌಡ ಬಯ್ಯಾಪೂರರವರು ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಪರೀಕ್ಷೆಗಳು ರದ್ದುಗೊಳಿಸಬಾರದು. ಬದಲಾಗಿ ಸುರಕ್ಷಿತ ಕ್ರಮಗಳು ಕೈಗೊಂಡು ಪರೀಕ್ಷೆ ನಡೆಸಬೇಕೆಂದು ಸಲಹೆ ನೀಡಿದರು.