ಬೆಂಗಳೂರು: ಎಸಿಬಿ ಕಳೆದ ಮೂರು ದಿನಗಳಿಂದ ಅಧಿಕಾರಿಗಳ ಕಚೇರಿ ಮತ್ತು ಮನೆಯಲ್ಲಿ ಕಾರ್ಯಾಚರಣೆ ನಡೆಸುತ್ತಿದೆ. ಇಂದು ಕರ್ನಾಟಕ ವಾಲ್ಮಿಕಿ ಅಭಿವೃದ್ಧಿ ನಿಗಮದ ಜನರಲ್ ಮ್ಯಾನೇಜರ್ ಮನೆಯಲ್ಲಿ ಎಸಿಬಿ ದಾಳಿ ಮಾಡಿದೆ.
ಗುರುವಾರ ಎಸಿಬಿ ಕರ್ನಾಟಕ ವಾಲ್ಮಿಕಿ ಅಭಿವೃದ್ಧಿ ನಿಗಮದ ಮೇಲೆ ದಾಳಿ ಮಾಡಿತ್ತು. ಈ ವೇಳೆ 22 ಲಕ್ಷ ನಗದು ಹಣವನ್ನು ಎಸಿಬಿ ಅಧಿಕಾರಿಗಳು ವಶಪಡಿಸಿಕೊಂಡಿದ್ದರು. ಇಂದು ಜನರಲ್ ಮ್ಯಾನೇಜರ್ ನಾಗೇಶ್ ಮತ್ತು ಅಧಿಕಾರಿ ಸುಬ್ಬಯ್ಯ ಮನೆ ಮೇಲೆ ದಾಳಿ ಮಾಡಿದ್ದು, ಮನೆಯಲ್ಲಿ ಲಕ್ಷ ಲಕ್ಷ ಹಣ ಪತ್ತೆಯಾಗಿದೆ.
ನಾಗೇಶ್ ಮನೆಯಲ್ಲಿ ಎಸಿಬಿ ಅಧಿಕಾರಿಗಳ ಕಾರ್ಯಾಚರಣೆ ಮಾಡಿದ್ದು, 82 ಲಕ್ಷ ಹಣವನ್ನು ವಶಪಡಿಸಿಕೊಂಡಿದ್ದಾರೆ. ಸದ್ಯಕ್ಕೆ ಎಸಿಬಿ ಅಧಿಕಾರಿಗಳು ನಾಗೇಶ್ ಮತ್ತು ಸುಬ್ಬಯ್ಯ ಇಬ್ಬರನ್ನು ಬಂಧಿಸಿದ್ದಾರೆ.
ಅಭಿವೃದ್ಧಿ ನಿಗಮದ ಅಧಿಕಾರಿಗಳು ಸರ್ಕಾರದಿಂದ ಹಣ ಮಂಜೂರು ಮಾಡಿಕೊಂಡು ಹಣ ಹೊಡೆಯುತ್ತಿದ್ದಾರೆ ಎಂಬ ಆರೋಪಿ ಕೇಳಿ ಬಂದಿತ್ತು. ಅಲ್ಲದೇ ಕಳಪೆ ಜಮೀನು ಖರೀದಿ ಮಾಡಿ ಜನರಿಗೆ ಮಾರಾಟ ಮಾಡಿದ್ದರು. ಜನರಿಂದ ಬಂದ ಹಣವನ್ನು ಹಂಚಿಕೊಳ್ಳುವಾಗ ಬೆಂಗಳೂರಿನ ವಸಂತ್ನಗರದಲ್ಲಿರುವ ವಾಲ್ಮಿಕಿ ಅಭಿವೃದ್ಧಿ ನಿಗಮದ ಮೇಲೆ ಎಸಿಬಿ ದಾಳಿ ಮಾಡಿತ್ತು. ಆಗ ಜನರಲ್ ಮ್ಯಾನೇಜರ್ ನಾಗೇಶ್ ಮತ್ತು ಅಧಿಕಾರಿ ಸುಬ್ಬಯ್ಯ ಇಬ್ಬರು ಸಿಕ್ಕಿಬಿದ್ದಿದ್ದರು.