– ಸಿಎಂ ಟೆಂಪಲ್ ರನ್ಗೆ ವ್ಯಂಗ್ಯ
ಯಾದಗಿರಿ: ಇನ್ನೂ ಎರಡು ಅಥವಾ ಮೂರು ತಿಂಗಳಲ್ಲಿ ಸಿಎಂ ಸ್ಥಾನದಿಂದ ಬಿಎಸ್ ಯಡಿಯೂರಪ್ಪನವರನ್ನು ತೆಗೆಯುತ್ತಾರೆ ಎಂದು ಶಹಪುರ ಕಾಂಗ್ರೆಸ್ ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಭವಿಷ್ಯ ನುಡಿದಿದ್ದಾರೆ.
ಶಹಪುರದ ಚಾಮನಾಳದಲ್ಲಿ ಮಾಧ್ಯಮದವರೊಂದಿಗೆ ಮಾತಾನಾಡಿದ ಶಾಸಕ, ಸಿಎಂ ಬಿಎಸ್ವೈ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದರು. ಸಿಎಂ ಬಿಎಸ್ವೈ ಪುತ್ರ ವಿಜಯೇಂದ್ರ ಮೇಲೆ ಓಪನ್ ಆಗಿ ಆರೋಪಗಳಿವೆ. ಎಲ್ಲಾ ಸಚಿವರು ಹಾಗೂ ಶಾಸಕರು ಈಗಾಗಲೇ ಬಿಜೆಪಿ ಹೈಕಮಾಂಡ್ಗೆ ಸಿಎಂ ಪುತ್ರನ ಬಗ್ಗೆ ದೂರು ನೀಡಿದ್ದಾರೆ. ಸಿಎಂ ಪುತ್ರನ ಮೇಲೆ ಹಲವಾರು ಆರೋಪಗಳಿರುವುದರಿಂದಾಗಿ ಬಿಎಸ್ ವೈ ಅವರನ್ನು ಬಿಜೆಪಿ ಹೈಕಮಾಂಡ್ ಮುಂದುವರಿಸಲು ಸಾಧ್ಯವಿಲ್ಲ. ರಾಜ್ಯಕ್ಕೆ ಬಂದ ಅಮಿತ್ ಶಾ ರಾಜ್ಯದಲ್ಲಿ ಐದು ವರ್ಷ ಬಿಜೆಪಿ ಸರ್ಕಾರ ಇರುತ್ತೆ ಅಂತ ಹೇಳಿದ್ದಾರೆ ಹೊರತು, ಐದು ವರ್ಷ ಯಡಿಯೂರಪ್ಪ ಸಿಎಂ ಆಗಿರುತ್ತಾರೆ ಅಂತ ಹೇಳಿಲ್ಲ ಎಂದರು.
ದೇವರು ಮೋರೆ ಹೋಗುವ ಬದಲು ಜನರ ಮೊರೆ ಹೋಗಬೇಕು, ಜನರ ಮನಸ್ಸಿನಲ್ಲಿ ನೀವು ಇದ್ದರೆ ಸರ್ಕಾರ ಮಾಡಬಹುದು ಎಂದು ಸಿಎಂ ಬಿಎಸ್ವೈ ಟೆಂಪಲ್ ರನ್ ಗೆ ಟಾಂಗ್ ನೀಡಿದರು. ಈಗಾಗಲೇ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ್ ಹಾಗೂ ರೇಣುಕಾಚಾರ್ಯ ಅವರು ಸಿಡಿ ವಿಚಾರದ ಬಗ್ಗೆ ಹೇಳಿಕೆ ನೀಡಿದ್ದಾರೆ. ಸಿಡಿ ವಿಚಾರವಾಗಿ ಸಿಎಂ ಬಿಎಸ್ವೈಗೆ ಹೆದರಿಸಿ ಹಣ ಕೊಟ್ಟು ಕೆಲವರು ಸಚಿವರಾಗಿದ್ದಾರೆ. ಶಾಸಕ ಯತ್ನಾಳ್ ಅವರು ಸಿಎಂ ಬಿಎಸ್ ವೈ ಅವರ ಸಿಡಿ ನೋಡಿರಬಹುದು ಅಂತ ವ್ಯಂಗ್ಯವಾಡಿದರು.