ಬೆಂಗಳೂರು: ಹಲವು ಕೊರೊನಾ ರೋಗಿಗಳು ರೆಮ್ಡಿಸಿವಿರ್ ಸಿಗದೆ ನರಳಾಡುತ್ತಿದ್ದಾರೆ. ಕುಟುಂಬಸ್ಥರು ಎಷ್ಟೇ ಪ್ರಯತ್ನಿಸಿದರೂ ರೆಮ್ಡಿಸಿವಿರ್ ಸಿಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ನಕಲಿ ಹಾಗೂ ದುಪ್ಪಟ್ಟು ಹಣಕ್ಕೆ ರೆಮ್ಡಿಸಿವಿರ್ ಮಾರಾಟ ಮಾಡುತ್ತಿದ್ದ ಐವರನ್ನು ಬಂಧಿಸಲಾಗಿದೆ.
ಸಂಜಯ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ನಡೆದಿದ್ದು, ನಕಲಿ ರೆಮ್ಡಿಸಿವಿರ್ ಮಾರಾಟ ಮಾಡುತ್ತಿದ್ದ ಕೃಷ್ಣ, ಸಾಗರ್ ಹಾಗೂ ದುಪ್ಪಟ್ಟು ಹಣಕ್ಕೆ ರೆಮ್ಡಿಸಿವಿರ್ ಮಾರಾಟ ಮಾಡುತ್ತಿದ್ದ ರವಿ ಕುಮಾರ್, ಕೃಷ್ಣ, ಮುನಿರಾಜು ಆರೋಪಿಗಳನ್ನು ಬಂಧಿಸಲಾಗಿದೆ.
ಆರೋಪಿಗಳಾದ ಕೃಷ್ಣ, ಸಾಗರ ದುಪ್ಪಟ್ಟು ಬೆಲೆಗೆ ರೆಮ್ಡಿಸಿವಿರ್ ಮಾರಾಟ ಮಾಡುತ್ತಿದ್ದಾಗ ಸಿಕ್ಕಿಬಿದ್ದು, ಕೃಷ್ಣ ಹೊಸೂರು ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾನೆ. ಡಾ.ಸಾಗರ್ ಮಾತೃ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಯಾಗಿ ಕೆಲಸ ಮಾಡಿಕೊಂಡಿದ್ದಾನೆ. ಸರ್ಕಾರದಿಂದ ರೋಗಿಗಳಿಗೆ ಕೊಡಲು ತರುತ್ತಿದ್ದ ರೆಮ್ಡಿಸಿವಿರ್ ಉಳಿಸಿಕೊಂಡು ಆರೋಪಿಗಳು ದುಪ್ಪಟ್ಟು ಹಣಕ್ಕೆ ಮಾರಾಟ ಮಾಡುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಸಂಜಯ್ ನಗರ ಪೊಲೀಸರು, ಆರೋಪಿಗಳನ್ನ ಬಂಧಿಸಿದ್ದಾರೆ. ಆರೋಪಿಗಳಿಂದ ಅಕ್ರಮವಾಗಿ ದುಪ್ಪಟ್ಟು ಹಣಕ್ಕೆ ಮಾರಾಟ ಮಾಡಲು ಮುಂದಾಗಿದ್ದ ರೆಮ್ಡಿಸಿವಿರ್ ವಶಪಡಿಸಿಕೊಳ್ಳಲಾಗಿದೆ.
ನಕಲಿ ರೆಮ್ಡಿಸಿವಿರ್ ಮಾರಾಟ
ನಕಲಿ ರೆಮ್ಡಿಸಿವಿರ್ ಅಸಲಿ ಎಂದು ಮಾರಾಟ ಮಾಡುತ್ತಿದ್ದ ರವಿ ಕುಮಾರ್, ಕೃಷ್ಣ, ಮುನಿರಾಜು ಎಂಬ ಮೂವರು ಆರೋಪಿಗಳನ್ನು ಸಂಜಯ್ ನಗರ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ನಕಲಿ ರೆಮ್ಡಿಸಿವಿರ್ ನ್ನು ಅಸಲಿ ಎಂದು ದುಪ್ಪಟ್ಟು ಹಣಕ್ಕೆ ಮಾರಾಟ ಮಾಡುತ್ತಿದ್ದರು. ಆರೋಪಿಗಳಿಂದ ಒಟ್ಟು 9 ರೆಮ್ಡಿಸಿವಿರ್ ವಶಪಡಿಸಿಕೊಳ್ಳಲಾಗಿದೆ. ಸದ್ಯ ಘಟನೆ ಸಂಬಂಧ ಸಂಜಯ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.