– ಬೈಕ್ ಸವಾರರ ಪಾಲಿಗೆ ಯಮಸ್ವರೂಪಿಗಳಾದ ಸಿಮೆಂಟ್ ಲಾರಿಗಳು
ಚಿಕ್ಕಬಳ್ಳಾಪುರ: ಸಿಮೆಂಟ್ ಲಾರಿಗಳು ಬೈಕ್ ಸವಾರರ ಪಾಲಿಗೆ ಯಮಸ್ವರೂಪಿಗಳಾಗಿದ್ದು, ಎರಡು ಪ್ರತ್ಯೇಕ ಅಪಘಾತಗಳಲ್ಲಿ ಇಬ್ಬರು ಸಾವನ್ನಪ್ಪಿದ್ದು, ಒಬ್ಬರ ಸ್ಥಿತಿ ಗಂಭಿರವಾಗಿದೆ.
ಸಿಮೆಂಟ್ ಲಾರಿ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ನಾಚಿಕುಂಟೆ ಬಳಿ ನಡೆದಿದೆ. ಆರೂಡಿ ಗ್ರಾಮದ 18 ವರ್ಷದ ಹರ್ಷವರ್ಧನ ಮೃತ ಬೈಕ್ ಸವಾರ ಎಂದು ತಿಳಿದುಬಂದಿದೆ. ಘಟನೆಯಲ್ಲಿ ಹರ್ಷವರ್ಧನ್ ತಂದೆ ಹನುಮಂತ ರೆಡ್ಡಿ ಸಹ ಗಂಭೀರವಾಗಿ ಗಾಯಗೊಂಡಿದ್ದು, ಬೆಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮತ್ತೊಂದು ಪ್ರಕರಣದಲ್ಲೂ ಸಿಮೆಂಟ್ ಲಾರಿ ಬೈಕ್ ಗೆ ಡಿಕ್ಕಿ ಹೊಡೆದಿದ್ದು, ಬೈಕ್ ಸವಾರ ಚಿಕ್ಕಹೊಸಹಳ್ಳಿ ಗ್ರಾಮದ 20 ವರ್ಷದ ಮುತ್ತೇಗೌಡ ಸಹ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇದರಿಂದಾಗಿ ಸ್ಥಳೀಯರು ಭಯಭೀತರಾಗಿದ್ದಾರೆ.
ಗೌರಿಬಿದನೂರು ತಾಲೂಕು ತೊಂಡೆಬಾವಿ ಬಳಿ ಎಸಿಸಿ ಸಿಮೆಂಟ್ ಕಾರ್ಖಾನೆ ಇದೆ. ಇಲ್ಲಿಂದ ಪ್ರತಿ ನಿತ್ಯ ನೂರಾರು ಲಾರಿಗಳು ಬೆಂಗಳೂರಿಗೆ ಓಡಾಟ ಮಾಡುತ್ತಿದ್ದು, ಲಾರಿ ಚಾಲಕರು ಅತಿ ವೇಗ ಅಜಾಗೂರೂಕತೆಯಿಂದ ಚಾಲನೆ ಮಾಡುತ್ತಾರೆ. ಹೀಗಾಗಿ ಸಿಮೆಂಟ್ ಲಾರಿಗಳಿಂದ ಪದೇ ಪದೇ ಅಪಘಾತಗಳಾಗುತ್ತಿವೆ. ಈ ಬಗ್ಗೆ ಪೊಲೀಸ್ ಇಲಾಖೆ ಲಾರಿ ಚಾಲಕರಿಗೆ ಎಚ್ಚರಿಕೆ ಕೊಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಮಂಚೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಎರಡು ಪ್ರತ್ಯೇಕ ಅಪಘಾತ ಪ್ರಕರಣಗಳು ದಾಖಲಾಗಿವೆ.