– ಮೊದಲ ದಿನ ನಾಲ್ಕು ಶವ
– ಎರಡನೇ ದಿನ ಐದು ಮೃತದೇಹಗಳು ಪತ್ತೆ
ಹೈದರಾಬಾದ್: ಕಳೆದ ಎರಡು ದಿನಗಳಲ್ಲಿ ಬಾವಿಯಿಂದ ಬರೋಬ್ಬರಿ ಒಂಬತ್ತು ಮೃತದೇಹಗಳು ಪತ್ತೆಯಾಗಿರುವ ಘಟನೆ ತೆಲಂಗಾಣದ ವಾರಂಗಲ್ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಗೊರ್ರೆಕುಂಟಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗುರುವಾರ ಬಾವಿಯಲ್ಲಿ ನಾಲ್ಕು ಮೃತದೇಹಗಳನ್ನು ಪೊಲೀಸರು ಹೊರತೆಗೆದಿದ್ದರು. ಶುಕ್ರವಾರ ಬಾವಿಯಲ್ಲಿ ಮತ್ತೊಂದು ಮೃತದೇಹ ತೇಲಿ ಬಂದಿದೆ. ಆಗ ಪೊಲೀಸರು ಬಾವಿಯಿಂದ ಸಂಪೂರ್ಣವಾಗಿ ನೀರನ್ನು ಹೊರಹಾಕಿದ್ದಾರೆ. ಆಗ ಮತ್ತೆ ನಾಲ್ಕು ಮೃತದೇಹಗಳನ್ನು ಹೊರತೆಗೆದಿದ್ದಾರೆ. ಈ ಮೂಲಕ ಒಂದೇ ಬಾಯಿಯಿಂದ ಪೊಲೀಸರು 9 ಮೃತದೇಹಗಳನ್ನು ಹೊರತೆಗೆದಿದ್ದಾರೆ.
ಮೃತರನ್ನು ಮಕ್ಸೂದ್ ಆಲಂ (50), ಪತ್ನಿ ನಿಶಾ (45), ಮಕ್ಕಳಾದ ಶಬಾಜ್ (21) ಮತ್ತು ಸೊಹೈಲ್ (20), ಮಗಳು ಬುಶ್ರಾ (22) ಮತ್ತು ಬುಶ್ರಾಳ ಮೂರು ವರ್ಷದ ಮಗ ಎಂದು ಗುರುತಿಸಲಾಗಿದೆ. ಮಕ್ಸೂದ್ ಮತ್ತು ಆತನ ಕುಟುಂಬ ಪಶ್ಚಿಮ ಬಂಗಾಳದವರಾಗಿದ್ದಾರೆ. ಇತರರು ಶ್ರೀರಾಮ್ (35), ಶ್ಯಾಮ್ (40) ಮತ್ತು ಶಕೀಲ್ (40) ಮೃತರಾಗಿದ್ದು, ಶ್ರೀರಾಮ್ ಮತ್ತು ಶ್ಯಾಮ್ ಬಿಹಾರ ಮೂಲದವರು. ಶಕೀಲ್ ಸ್ಥಳೀಯರಾಗಿದ್ದು, ಹತ್ತಿರದ ಕಾರ್ಖಾನೆಯಲ್ಲಿ ಚಾಲಕರಾಗಿ ಕೆಲಸ ಮಾಡುತ್ತಿದ್ದರು.
ಮಕ್ಸೂದ್ ಮತ್ತು ಅವರ ಕುಟುಂಬ 20 ವರ್ಷಗಳ ಹಿಂದೆ ವಾರಂಗಲ್ ನಗರದ ಕರೀಮ್ ಬಾದ್ನಲ್ಲಿ ನೆಲೆಸಿದ್ದರು. ಮಕ್ಸೂದ್ ಮತ್ತು ಆತನ ಪತ್ನಿ ನಿಶಾ ಗೊರ್ರೆಕುಂಟಾದಲ್ಲಿ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಲಾಕ್ಡೌನ್ ನಿರ್ಬಂಧದಿಂದ ಕುಟುಂಬವು ನಗರದ ಕರೀಮ್ಬಾದ್ನಲ್ಲಿರುವ ತಮ್ಮ ಬಾಡಿಗೆ ಮನೆಗೆ ಹೋಗಲು ಸಾಧ್ಯವಾಗಲಿಲ್ಲ. ಹೀಗಾಗಿ ಕಾರ್ಖಾನೆ ಮಾಲೀಕ ಗೋಡೌನ್ನಲ್ಲಿ ಉಳಿದುಕೊಳ್ಳುವಂತೆ ಹೇಳಿದ್ದ. ಇನ್ನೂ ಶ್ರೀರಾಮ್ ಮತ್ತು ಶ್ಯಾಮ್ ಕಟ್ಟಡದ ಟೆರೇಸ್ನಲ್ಲಿರುವ ರೂಮಿನಲ್ಲಿ ವಾಸಿಸುತ್ತಿದ್ದರು.
ಗೋಡೌನ್ನಲ್ಲಿದ್ದ ನೌಕರರು ನಾಪತ್ತೆಯಾಗಿದ್ದಾರೆ ಎಂದು ಕಾರ್ಖಾನೆ ಮಾಲೀಕರು ಗುರುವಾರ ಬೆಳಗ್ಗೆ ಗೀಸುಗೊಂಡಾ ಪೊಲೀಸರಿಗೆ ದೂರು ನೀಡಿದ್ದಾರೆ. ಮಧ್ಯಾಹ್ನದ ವೇಳೆ ಗೋಡೌನ್ ಪಕ್ಕದ ಬಾವಿಯಲ್ಲಿ ನಾಲ್ಕು ಮೃತದೇಹಗಳು ತೇಲಿ ಬಂದಿದೆ ಪೊಲೀಸ್ ಅಧಿಕಾರಿ ವಿ.ರವೀಂದ್ರ ತಿಳಿಸಿದ್ದಾರೆ.
ಲಾಕ್ಡೌನ್ ಹಿನ್ನೆಲೆಯಲ್ಲಿ ಆರ್ಥಿಕ ಸಮಸ್ಯೆಗಳಿಂದ ಕುಟುಂಬ ಆತ್ಮಹತ್ಯೆಗೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಮೃತದೇಹದ ಮೇಲೆ ಯಾವುದೇ ಗಾಯಗಳು ಕಂಡು ಬಂದಿಲ್ಲ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಸದ್ಯಕ್ಕೆ ಈ ಕುರಿತು ಪ್ರಕರಣ ದಾಖಲಾಗಿದ್ದು, ತನಿಖೆಗಾಗಿ ವಿಶೇಷ ತಂಡವನ್ನು ರಚಿಸಲಾಗಿದೆ. ಆದರೆ ಕಾರ್ಮಿಕರ ಸಾವಿಗೆ ಇನ್ನೂ ನಿಖರವಾದ ಕಾರಣ ತಿಳಿದು ಬಂದಿಲ್ಲ. ಮರಣೋತ್ತರ ಪರೀಕ್ಷೆಯ ವರದಿಯಾಗಿ ಕಾಯಲಾಗುತ್ತಿದೆ ಎಂದು ಪೊಲೀಸ್ ಇನ್ಸ್ ಪೆಕ್ಟರ್ ಶಿವ ರಾಮಯ್ಯ ಹೇಳಿದ್ದಾರೆ.
#WATCH #Warangal CP Dr V Ravinder explains about suspicious death of nine migrants in a well in #Telangana @TOITelangana @TOICitiesNews @timesofindia @TelanganaDGP @TelanganaCOPs @cpwrlc pic.twitter.com/LrARH2h1HC
— TOI Hyderabad (@TOIHyderabad) May 22, 2020