– ಸಚಿವರಿಂದ ವಿವಾದಾತ್ಮಕ ಹೇಳಿಕೆ
ಮೈಸೂರು: ಅನ್ಯ ಜಿಲ್ಲೆಯ ಸೋಂಕಿತರಿಗೆ ಪ್ರವೇಶವಿಲ್ಲ. ಬೆಂಗಳೂರು ಸೇರಿ, ಬೇರೆ ಜಿಲ್ಲೆಯ ಸೋಂಕಿತರಿಗೆ ಮೈಸೂರಲ್ಲಿ ನೋ ಎಂಟ್ರಿ ಎಂದು ಸೋಮಶೇಖರ್ ಅವರು ವಿವಾದಾತ್ಮಕ ಆದೇಶ ಕೈಗೊಂಡಿದ್ದಾರೆ.
ಸಚಿವರ ಈ ಹೇಳಿಕೆ ಇದೀಗ ವಿವಾದ ಸೃಷ್ಟಿಸಿದ್ದು, ಚಾಮರಾಜನಗರ, ಮಂಡ್ಯ ಜಿಲ್ಲೆಯವರು ಎಲ್ಲಿಗೆ ಹೋಗಬೇಕು? ಸಚಿವ ಸೋಮಶೇಖರ್ ಈ ಆದೇಶ ಸರೀನಾ ಎಂಬ ಪ್ರಶ್ನೆ ಉದ್ಭವಿಸಿದೆ.
ಎಸ್ಟಿಎಸ್ ಹೇಳಿದ್ದೇನು?
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಒಂದು ಜಿಲ್ಲೆಯಿಂದ ಇನ್ನೊಂದು ಜಿಲ್ಲೆಗೆ ಯಾರೂ ಬರಬಾರದು ಎಂಬ ನಿರ್ಬಂಧ ಹೇರಿದ್ದೇವೆ. ಸರ್ಕಾರ ಕೂಡ ಮಾಡಿಬಿಟ್ಟಿದೆ. ಮೈಸೂರಿನಲ್ಲಿ ಪ್ರತಿ ದಿನ ಬರುತ್ತಿರುವ ಕೊರೊನಾ ಪ್ರಕರಣಗಳಲ್ಲಿ ಆಕ್ಸಿಜನ್ ಬೆಡ್ ಎಷ್ಟು ಜನ ಕೇಳುತ್ತಿದ್ದಾರೆ. ಆ ಆಧಾರದ ಮೇಲೆ ನಮಗೆ ಆಕ್ಸಿಜನ್ ಕೊಡಿ ಎಂಬುದನ್ನು ಸಿಎಂ ಅವರನ್ನು ಖುದ್ದು ಭೇಟಿಯಾಗಿ ಮಾತುಕತೆ ನಡೆಸಿದ್ದೇನೆ. ಅಶ್ವಥ್ ನಾರಾಯಣ್ ಅವರ ಬಳಿಯೂ ಮಾತುಕತೆ ನಡೆಸಿದ್ದೇನೆ. ಅವರು ಕೂಡ ಇಡೀ ರಾಜ್ಯಕ್ಕೆ ಆಕ್ಸಿಜನ್ ತರಿಸಿಕೊಡುತ್ತಿದ್ದಾರೆ ಎಂದರು.
ಅಂತರ್ ಜಿಲ್ಲೆಯಿಂದ ಪ್ರಯಾಣಿಕರು ಮಾತ್ರವಲ್ಲದೇ ಸೋಂಕಿತರು ಕೂಡ ಬರಬಾರದು. ಯಾವುದಾದರೂ ಎಮರ್ಜೆನ್ಸಿ ಇದ್ದರೆ ಮಾತ್ರ ಬರೋಕೆ ಅವಕಾಶ ನೀಡುತ್ತೇವೆ. ಈ ಹಿಂದೆ ಯಾರೂ ಕೂಡ ಮೈಸೂರಿಗೆ ಬರಬಹುದಿತ್ತು. ಅಲ್ಲಿಂದ ಬಂದು ಇಲ್ಲಿ ರೋಗ ಅಂಟಿಸುವುದನ್ನು ತಡೆಯುವ ಉದ್ದೇಶ ಇದಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ಹೊರ ಜಿಲ್ಲೆಗಳ ಪ್ರಯಾಣಿಕರು ಸೋಂಕಿತರಿಗೂ ಮೈಸೂರಿಗೆ ಪ್ರವೇಶವಿಲ್ಲ. ಕೊನೆ ಕ್ಷಣದಲ್ಲಿ ಸೋಂಕಿತರು ಮೈಸೂರಿಗೆ ಬರುತ್ತಿದ್ದಾರೆ. ಇದರಿಂದ ಹೆಚ್ಚಿನ ಸಾವು ನೋವುಗಳಾಗುತ್ತಿವೆ. ಆದ್ದರಿಂದ ಮೈಸೂರು ಜಿಲ್ಲೆಗೆ ಎಲ್ಲಾ ರೀತಿಯ ನಿರ್ಬಂಧ ಹೇರಲಾಗಿದೆ ಎಂದರು.
ಮೈಸೂರಿಗೆ ಇನ್ನೂ ಹೆಚ್ಚುವರಿ ಆಕ್ಸಿಜನ್ ಅವಶ್ಯಕತೆ ಇದೆ. ನಮ್ಮ ಕೋಟಾ ಹೆಚ್ಚಿಸಲು ಸರ್ಕಾರವನ್ನು ಕೇಳಿದ್ದೇನೆ. ನಮಗೆ ಆಕ್ಸಿಜನ್ ಕೋಟಾ ಹೆಚ್ಚಾಗಬಹುದು. ನಮ್ಮಲ್ಲಿ ಪಾಸಿಟಿವ್ ಪ್ರಕರಣ ಕೊರೊನಾ ರೋಗಿಗಳ ಸಂಖ್ಯೆ ಆಧರಿಸಿ ಹೆಚ್ಚುವರಿ ಆಕ್ಸಿಜನ್ಗೆ ಮನವಿ ಮಾಡಿದ್ದೇನೆ. ಹೊರ ಜಿಲ್ಲೆ ಎಲ್ಲಾ ಸೋಂಕಿತರೂ ಮೈಸೂರಿಗೆ ಬರುವುದು ಬೇಡ. ಅಗತ್ಯ ತುರ್ತು ಅವಶ್ಯಕತೆ ಇದ್ರೆ ಮಾತ್ರ ಮೈಸೂರಿಗೆ ಬನ್ನಿ ಎಂದು ಅವರು ತಿಳಿಸಿದರು.
ಇದೇ ವೇಳೆ ಮೈಸೂರಿನಲ್ಲಿ ಸೋಂಕಿತರಿಗೆ ಬೆಡ್ ಕೊರತೆ ವಿಚಾರಕ್ಕೆ ಪ್ರತಿಕ್ರಿಯಿಸಿ ಸುತ್ತೂರು ಮಠದ ಸಹಕಾರವನ್ನು ಕೇಳಿದರು.