ಎಪಿಎಂಸಿಗೆ ಭೂಮಿ ಕೊಟ್ಟ ರೈತನಿಗಿಲ್ಲ ಪರಿಹಾರ- ಕೋರ್ಟ್ ಆದೇಶ ಮೇರೆಗೆ ಎಪಿಎಂಸಿ ಕಚೇರಿ ಜಪ್ತಿ

Public TV
1 Min Read
gdg apmc 2

ಗದಗ: ಅಡಿಕೆಗೆ ಹೋದ ಮಾನ ಆನೆ ಕೋಟ್ರು ಬಾರದು ಅಂತಾರೆ. ಅದರಂತಾಗಿದೆ ಗದಗ ಎಪಿಎಂಸಿ ಕಚೇರಿ ಕಥೆ. ಗದಗ ನಗರದ ಎಪಿಎಂಸಿ ಕಚೇರಿಯನ್ನ ಇಂದು ಜಪ್ತಿ ಮಾಡಲಾಗಿದೆ. ಕಾರಣ ಆರ್.ಆರ್.ಹೇಮಂತನವರ ಎಂಬವರು 4 ಎಕರೆ 35 ಗುಂಟೆ ಜಾಗೆಯನ್ನು 40 ವರ್ಷಗಳ ಹಿಂದೆ ಎಪಿಎಂಸಿಗಾಗಿ ಸ್ವಾದೀನಪಡಿಸಿಕೊಂಡಿತ್ತು. ಆಗ ಸುಮಾರು 76 ಲಕ್ಷ ರೂಪಾಯಿ ಪರಿಹಾರ ಹಣ ಬಿಡುಗಡೆ ಮಾಡಿದ ಎಪಿಎಂಸಿ, ಇನ್ನುಳಿದ 16.50 ಲಕ್ಷ ರೂಪಾಯಿ ಪಾವತಿಸಲು ವಿಳಂಬ ಮಾಡಿದೆ.

gdg apmc 1

ಈ ಬಗ್ಗೆ ಹಲವು ಬಾರಿ ಮನವಿ ಮಾಡಿದರೂ, ಅಧಿಕಾರಿಗಳು ಸ್ಪಂದಿಸಲಿಲ್ಲ. ಹಲವು ಬಾರಿ ಎಪಿಎಂಸಿ ಅಧಿಕಾರಿಗಳಿಗೆ ಕೋರ್ಟ್ ನೋಟಿಸ್ ಬಿಸಿ ಮುಟ್ಟಿಸಿದ್ರು. ಅದಕ್ಕೂ ಡೋಂಟ್‍ಕೇರ್ ಅನ್ನುವ ಅಧಿಕಾರಿಗಳ ಮೂಗುದಾರಕ್ಕೆ ಕೈ ಹಾಕಿದ್ದಾರೆ. ಈ ಹಿಂದೆ ಭೂ ಸ್ವಾಧೀನ ಅಧಿಕಾರಿ, ಎಪಿಎಂಸಿ ಉಪವಿಭಾಗಾಧಿಕಾರಿಯನ್ನು ಹೊಣೆಯಾಗಿಸಿ, ಅವರ ಕಚೇರಿಯನ್ನು ಜಪ್ತಿಗೆ ಮುಂದಾಯಿತು. ಗದಗ ಜಿಲ್ಲಾ ಪ್ರಧಾನಿ ದಿವಾನಿ ನ್ಯಾಯಾಲಯ ಆದೇಶ ಹೊರಡಿಸಿದೆ. ಹೀಗಾಗಿ ನ್ಯಾಯಾಲಯದ ಆದೇಶದ ಮೇರೆಗೆ ಜಪ್ತು ವಾರೆಂಟ್ ಆಧರಿಸಿ, ಕಚೇರಿಯ 1 ಸ್ಕಾರ್ಪಿಯೋ ಕಾರು ಮತ್ತು ನಾಲ್ಕು ಕಂಪ್ಯೂಟರ್, ಖುರ್ಚಿಗಳನ್ನು ವಶಕ್ಕೆ ಪಡೆದಿದೆ.

gdg apmc 3

ಈ ಪ್ರಕರಣ ಇಂದು ನಿನ್ನೆಯದಲ್ಲ. ಸುಮಾರು 40 ವರ್ಷಗಳ ಹಳೆಯ ಪ್ರಕರಣ. ಗದಗಿನಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ರಚನೆಗಾಗಿ 1977ರಲ್ಲಿ ಭೂ ಸ್ವಾಧೀನ ಅಧಿಸೂಚನೆ ಹೊರಡಿಸಿತ್ತು. 1982ರಲ್ಲಿ ಆರ್.ಆರ್.ಹೇಮಂತನವರ ಜಮೀನು ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಎಪಿಎಂಸಿಯಿಂದ ಬರಬೇಕಿದ್ದ ಬಾಕಿ ಪರಿಹಾರ ಹಣಕ್ಕಾಗಿ ಸುಪ್ರೀಂ ಕೋರ್ಟ್‍ವರೆಗೆ ಹೋಗಿತ್ತು. ಪ್ರಕರಣ ಪುನಃ ಜಿಲ್ಲಾ ಪ್ರಧಾನ ಹಿರಿಯ ದಿವಾಣಿ ನ್ಯಾಯಾಲಯಕ್ಕೆ ಜ್ಞಾಪನಾ ಆದೇಶ ಆಗಿದ್ದರಿಂದ ಸದರಿ ಪ್ರಕರಣದಲ್ಲಿ ರೈತರಿಗೆ ಪ್ರತಿ ಚದರ ಅಡಿಗೆ 8.50 ರೂಪಾಯಿ ಪರಿಹಾರ ನೀಡುವಂತೆ ಆದೇಶಿಸಿತ್ತು.

gdg apmc 4

ಅಧಿಕಾರಿಗಳು ಅಂದಿನಿಂದ ಇಂದಿನವರೆಗೂ ವಿನಾಕಾರಣ ವಿಳಂಬ ಮಾಡುತ್ತಲೇ ಬಂದಿದ್ದರು. ಕೋರ್ಟ್ ಆದೇಶದಂತೆ ಕಚೇರಿ ಜಪ್ತಿ ಮಾಡಲಾಗಿದೆ. ಇತ್ತ ಜಪ್ತಿ ಕಾರ್ಯ ನಡೆಯುತ್ತಿದ್ದಂತೆ ಎಪಿಎಂಸಿ ಅಧಿಕಾರಿಗಳು ಪಲಾಯನಗೊಂಡರು.

Share This Article
Leave a Comment

Leave a Reply

Your email address will not be published. Required fields are marked *