– ಹೊತ್ತಿ ಉರಿದ ಕಾರು
– ಕಾರಿನಲ್ಲಿದ್ದ ಮದ್ಯದ ಟಿನ್ಗಳು ಬ್ಲಾಸ್ಟ್
ಬೆಂಗಳೂರು: ಐದಡಿ ಎತ್ತರದ ತಡೆಗೋಡೆ ಮೇಲೆ ಹರಿದ ಕಾರು ಪಲ್ಟಿಯಾಗಿ ಇಪ್ಪತ್ತು ಅಡಿ ದೂರದಲ್ಲಿ ತಲೆ ಕೆಳಗಾಗಿ ಬಿದ್ದ ಭಯಾನಕ ರಸ್ತೆ ಅಪಘಾತ ಇಂದು ನಗರದಲ್ಲಿ ನಡೆದಿದೆ.
ನ್ಯೂ ಬಿಇಎಲ್ ರಸ್ತೆಯಲ್ಲಿ ಘಟನೆ ನಡೆದಿದ್ದು, ಕಾರಿನಲ್ಲಿದ್ದ ಐವರ ಪೈಕಿ ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನೋರ್ವ ಪ್ರಜ್ಞೆ ತಪ್ಪಿದ್ದು, ಎಲ್ಲರನ್ನೂ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಿಲಿಕಾನ್ ಸಿಟಿಯಲ್ಲಿ ಮಳೆಗೂ ಮುನ್ನ ನಡೆದ ಭಯಾನಕ ಆಕ್ಸಿಡೆಂಟ್ ಇದಾಗಿದೆ. ಕುಡಿದು ಅಡ್ಡಾದಿಡ್ಡಿ ಕಾರು ಓಡಿಸಿದ ಪರಿಣಾಮ ದೊಡ್ಡ ಅನಾಹುತವೇ ನಡೆದು ಹೋಗಿದೆ. ಹೆಬ್ಬಾಳ ಕಡೆಯಿಂದ ಬರುತ್ತಿದ್ದ ಹೋಂಡಾ ಕಾರು ನ್ಯೂ ಬಿಇಎಲ್ ರಸ್ತೆಗೆ ಹೋಗಲು ಸರ್ವಿಸ್ ರಸ್ತೆಗೆ ಎಂಟ್ರಿ ಕೊಟ್ಟಿದೆ. ಅದೆಷ್ಟು ಸ್ಪೀಡ್ ಆಗಿ ಓಡಿಸುತ್ತಿದ್ದರೋ ಏನೋ, ಐದಡಿ ಎತ್ತರದ ತಡೆಗೋಡೆ ಮೇಲೆ ಕಾರು ಹರಿದಿದೆ. ಆ ಬಳಿಕ ಕಾರು ತಲೆ ಕೆಳಗಾಗಿ ಬಿದ್ದಿದೆ.
ಪೆಟ್ರೋಲ್ ಸೋರಿಕೆಯಾಗಿ ಕ್ಷಣಾರ್ಧದಲ್ಲಿ ಕಾರು ಧಗ ಧಗನೆ ಹೊತ್ತಿ ಉರಿದಿದೆ. ಲಾಕ್ ಡೌನ್ ಇದ್ದಿದ್ದರಿಂದಲೋ ಏನೊ ನಡೆಯಬಹುದಾದ ಬಹುದೊಡ್ಡ ಅವಘಡ ತಪ್ಪಿದಂತಾಗಿದೆ. ಇಲ್ಲವಾದಲ್ಲಿ ಇವರು ಒಂದಷ್ಟು ಅಮಾಯಕ ಜೀವಗಳನ್ನು ಬಲಿ ಪಡೆದು ಬಿಡೆಯುತ್ತಿದ್ದರು.
ಕಾರು ತಲೆ ಕೆಳಗಾಗುತ್ತಿದ್ದಂತೆ ಸ್ಥಳೀಯರು ನೆರವಿಗೆ ಬಂದಿದ್ದಾರೆ. ತಕ್ಷಣವೇ ಕಾರಿನ ಡೋರ್ ಮುರಿದು ಕಾರಿನ ಒಳಗಿದ್ದ ಐದು ಮಂದಿಯನ್ನು ಹೊರಗೆ ಎಳೆದಿದ್ದಾರೆ. ಹೊರಗೆ ಎಳೆದ ಎರಡು ನಿಮಿಷದಲ್ಲೇ ಕಾರಿಗೆ ಬೆಂಕಿ ಹೊತ್ತಿಕೊಂಡಿದೆ. ಐದು ನಿಮಿಷದಲ್ಲಿ ಘಟನಾ ಸ್ಥಳಕ್ಕೆ ಅಗ್ನಿಶಾಮಕದಳ ಬಂದಿತ್ತು. ಅಷ್ಟರಲ್ಲಾಗಲೆ ಕಾರು ಸುಟ್ಟು ಕರಕಲಾಗಿ ಹೋಗಿತ್ತು. ಚೆನ್ನಾಗಿ ಟೈಟಾಗಿದ್ದ ಐವರು ಕಾರಿನಲ್ಲೂ ಕೂಡ ಎಣ್ಣೆ ಇಟ್ಕೊಂಡಿದ್ದರು. ಬೆಂಕಿಯ ಜ್ವಾಲೆಗೆ ಎಣ್ಣೆ ಬಾಟೆಲ್ಗಳು ಸಿಡಿಯತೊಡಗಿದ್ದವು.
ಈ ಸಂಬಂಧ ಜಾಲಹಳ್ಳಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.