– ಸುಧಾಕರ್ ಆ ರೀತಿ ಮಾತಾಡ್ಬಾರ್ದು
ಬೆಂಗಳೂರು: 224 ಶಾಸಕರಾ..!! ಎಂಎಲ್ಸಿ ಹಾಗೂ ಲೋಕಸಭಾ ಸದಸ್ಯರನ್ನು ಸಚಿವ ಸುಧಾಕರ್ ಯಾಕೆ ಬಿಟ್ಟರು ಎಂದು ಶಾಸಕ ರಾಮಲಿಂಗಾ ರೆಡ್ಡಿ ಪ್ರಶ್ನಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ 224 ಶಾಸಕರನ್ನು ತನಿಖೆ ಮಾಡಬೇಕು ಎಂಬ ಸಚಿವ ಸುಧಾಕರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಎಂಎಲ್ಸಿ ಹಾಗೂ ಲೋಕಸಭಾ ಸದಸ್ಯರನ್ನು ಯಾಕೆ ಬಿಟ್ಟರು. ಅವರನ್ನು ಕೂಡ ತನಿಖೆ ನಡೆಸುವಂತೆ ಹೇಳಬೇಕಿತ್ತು ಎಂದು ಸುಧಾಕರ್ ಕಾಲೆಳೆದಿದ್ದಾರೆ.
ಅದೇನೋ ಅಂತಾರಲ್ವ ಹಸು ಕರುಗೆ ಜ್ವರ ಬಂದ್ರೆ ಎಮ್ಮೆಗೆ ಬರ ಹಾಕ್ತಾರೆ ಅಂತ. ಸುಧಾಕರ್ ಯಾಕೆ ಹಾಗೆ ಅಂತಾರೆ ಅಂತ ನನಗೆ ಅರ್ಥ ಆಗ್ಲಿಲ್ಲ. ಬುದ್ಧಿವಂತರಾಗಿರುವ ಸುಧಾಕರ್ ಅವರು ಮಾತನಾಡುವಾಗ ಯಾಕೆ ಆ ರೀತಿ ಹೇಳಿದ್ರು ಅಂತ ನನಗೆ ಗೊತ್ತಾಗ್ಲಿಲ್ಲ. ಅವರು ಆಡಿರುವ ಮಾತು ಸರಿ ಇಲ್ಲ ಎಂದು ಖಂಡಿಸಿದರು.
ವಿಧಾನಸಭೆ ನಡೆಯುತ್ತಿರುವ ಸಂದರ್ಭದಲ್ಲಿ ವಿರೋಧ ಪಕ್ಷದವರು ಸಹಜವಾಗಿಯೇ ಇದನ್ನೆಲ್ಲ ಮಾಡ್ತಾರೆ. ಹಿಂದೆ ಮೇಟಿ ಪ್ರಕರಣದಲ್ಲಿಯೂ ವಿರೋಧ ಪಕ್ಷದದಲ್ಲಿದ್ದ ಬಿಜೆಪಿಯವರು ಕೂಡ ಮಾತಾಡಿದ್ದರು. ಜೆಡಿಎಸ್ ನವರು ಮಾತಾಡಿದ್ದರು. ದೇಶದ, ರಾಜ್ಯದ ಯಾವುದೆ ಸಂಸತ್, ವಿಧಾನ ಸಭೆ, ವಿಧಾನ ಪರಿಷತ್ ನಲ್ಲಿ ಈ ರೀತಿಯ ಘಟನೆಗಳಾದಾಗ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾತಾಡ್ತಾರೆ. ಅದನ್ನು ಕೇಳೋದೇ ತಪ್ಪು ಅನ್ನೋದು ಇಲ್ಲ. ಅವರು ನಿರ್ದೋಷಿಗಳಾಗಿದ್ದರೆ ಖಂಡಿತ ತನಿಖೆ ಆದ ಮೇಲೆ ಅವರಿಗೆ ನಿರ್ದೋಷಿ ಎಂಬ ಸರ್ಟಿಫಿಕೇಟ್ ಸಿಗುತ್ತದೆ ಎಂದು ತಿಳಿಸಿದರು.
ವೈಯಕ್ತಿಕವಾಗಿ ಎಲ್ಲಾ ಶಾಸಕರು ಅಂದಾಗ ವಿಧಾನಪರಿಷತ್ ಸದಸ್ಯ, ಸಂಸತ್, ರಾಜ್ಯ ಸಭಾದವರನ್ನು ಯಾಕ್ ಬಿಟ್ರು ಅಂತ ಕೇಳ್ತೀವಿ. ಒಂದಕ್ಕೊಂದು ಸಂಬಂಧ ಇಲ್ಲ. ಸುಧಾಕರ್ ಯಾಕೆ ಆ ರೀತಿ ಮಾತಾಡಿದ್ರೋ ಗೊತ್ತಿಲ್ಲ. ಆ ರೀತಿ ಮಾತಾಡಬಾರದು. ನನಗೆ ಸಿಕ್ಕರೆ ಸುಧಾಕರ್ ಅವರಿಗೆ ಹೇಳ್ತೀನಿ ಅಂತ ಹೇಳೀದರು.