ಚಿಕ್ಕಮಗಳೂರು : ಜಿಲ್ಲೆಯ ಮೂಡಿಗೆರೆ ತಾಲೂಕಿನ ಕುದುರೆಮುಖ ಅದಿರು ಕಂಪನಿ ಉತ್ತುಂಗದ ಸ್ಥಿತಿಯಲ್ಲಿದ್ದಾಗ ಮೆಸ್ನಲ್ಲಿ ನಡೆದಿದ್ದ ಗಲಾಟೆ ಸಂಬಂಧ 24 ವರ್ಷಗಳ ಬಳಿಕ ಆರೋಪಿಯನ್ನು ಕೇರಳದ ಅಲೆಪ್ಪಿಯಲ್ಲಿ ಬಂಧಿಸಿ ಕರೆತರಲಾಗಿದೆ.
ಬಂಧಿತನನ್ನು ಅಲೆಕ್ಸಾಂಡರ್ ಎಂದು ಗುರುತಿಸಲಾಗಿದೆ. ಬಂಧಿತ ಅಲೆಕ್ಸಾಂಡರ್ ಕುದುರೆಮುಖ ಕಂಪನಿಯಲ್ಲಿ ಕಾರ್ಮಿಕನಾಗಿದ್ದ. ಕ್ಷುಲ್ಲಕ ಎರಡು ಗುಂಪಿನ ಮಧ್ಯೆ ಮಾರಾಮಾರಿ ನಡೆದಿತ್ತು. ಗಲಾಟೆ ವೇಳೆ ಚಾಕು ಹಾಕಿದ್ದ ಆರೋಪಿ ಅಲೆಕ್ಸಾಂಡರ್ 2004ರಲ್ಲಿ ಎಸ್ಕೇಪ್ ಆಗಿ ಕೇರಳಕ್ಕೆ ಪರಾರಿಯಾಗಿದ್ದ.
1997ರಲ್ಲಿ ನಡೆದ ಗಲಾಟೆ ಕೇಸ್ 2004 ರವರೆಗೂ ನ್ಯಾಯಾಲಯದಲ್ಲಿತ್ತು. ಘಟನೆ ನಡೆದು ಹಲವು ವರ್ಷವಾದರೂ ಪೊಲೀಸರು ಹೋಗದ ಕಾರಣ ನಾನು ಬಚಾವ್ ಆದೆ ಎಂದು ಭಾವಿಸಿದ್ದ. ಆದರೆ, 17 ವರ್ಷಗಳ ಬಳಿಕ ಮಾಹಿತಿ ಕಲೆ ಹಾಕಿದ ಚಿಕ್ಕಮಗಳೂರು ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಏನಿದು ಪ್ರಕರಣ?
ಈ ಮೂಲಕ ಖಾಕಿ ರೆಕಾರ್ಡಲ್ಲಿ ಎಂಟ್ರಿಯಾದರೆ ಪಾತಾಳದಲ್ಲಿದ್ದರೂ ಬಿಡಲ್ಲ ಅನ್ನೋದಕ್ಕೆ ಕಾಫಿನಾಡ ಪೊಲೀಸರು ಸಾಕ್ಷಿಯಾಗಿದ್ದಾರೆ. ಯಾಕೆಂದರೆ, ಅದು 1997ರ ಜೂನ್ ತಿಂಗಳಲ್ಲಿ ನಡೆದ ಗಲಾಟೆ. ಸುಮಾರು 25 ವರ್ಷಗಳ ಸಮೀಪ. ಕುದುರೆಮುಖ ಸಂಸ್ಥೆಯ ಕ್ಯಾಂಟೀನಲ್ಲಿ ಊಟದ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದು ಇಬ್ಬರಿಗೆ ಚಾಕು ಹಾಕಿದ್ದರು. ಕುದುರೆಮುಖ ಠಾಣೆಯಲ್ಲಿ ಕೇಸ್ ದಾಖಲಾಗಿ, ನಾಲ್ವರು ಮೇಲೆ ಎಫ್ಐಆರ್ ಆಗಿತ್ತು.
2004ರಲ್ಲಿ ಅಲೆಕ್ಸಾಂಡರ್ ಎಸ್ಕೇಪ್ ಆಗಿದ್ದ. ಬಳಿಕ ಕುದುರೆಮುಖ ಕಂಪನಿ ಬಾಗಿಲು ಹಾಕಿತು. ಆದರೆ, ಪೊಲೀಸರು ಆರೋಪಿಗಾಗಿ ಹುಡುಕೋದನ್ನು ಬಿಡಲಿಲ್ಲ. 17 ವರ್ಷಗಳ ಕಾಲ ಎಲ್ಲಿದ್ದಾನೆ ಅಂತಾನೆ ಗೊತ್ತಾಗಲಿಲ್ಲ. 17 ವರ್ಷಗಳೇ ಕಳೆದು ಹೋದವು. ಪೊಲೀಸರು ಕೇಸನ್ನು ಮರೆತಿರುತ್ತಾರೆ ನಾನು ಬಚಾವ್ ಅಂತ ಅಂದುಕೊಂಡಿದ್ದ ಆರೋಪಿಗೆ ಕಾಫಿನಾಡ ಪೊಲೀಸರು ಅನ್ಎಕ್ಸ್ ಪೆಕ್ಟೆಡ್ ಶಾಕ್ ನೀಡಿ ಕರೆತಂದು ಕೋರ್ಟಿಗೆ ಹಾಜರು ಪಡಿಸಿದ್ದಾರೆ.
ಕುದುರೆಮುಖ ಠಾಣೆಗೆ ಇತ್ತೀಚೆಗೆ ಪಿ.ಎಸ್.ಐ. ಆಗಿ ಕುಮಾರ್ ಚಾರ್ಜ್ ತೆಗೆದುಕೊಂಡು ಈ ಹಳೇ ಕೇಸಿನ ಬೆನ್ನು ಬಿದ್ದಿದ್ದರು. ಸ್ನೇಹಿತನ ಮೂಲಕ ಆರೋಪಿ ಕೇರಳದಲ್ಲಿ ಇರೋದನ್ನು ಖಚಿತಪಡಿಸಿಕೊಂಡು ಪೊಲೀಸ್ ಸಿಬ್ಬಂದಿಯಾದ ಸುರೇಶ್ ರಾವ್, ಯುವರಾಜ್, ಶ್ರೀಧರ್ ಎಂಬುವರನ್ನು ಕಳುಹಿಸಿ ಲಾಕ್ ಮಾಡಿಸಿದ್ದಾರೆ. ಇಬ್ಬರಿಗೆ ಚಾಕು ಹಾಕಿ 17 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಪೊಲೀಸರ ಅತಿಥಿಯಾಗಿದ್ದಾನೆ. 17 ವರ್ಷಗಳ ಹಿಂದಿನ ಕೇಸು. ಬೇಲ್ ಸಿಗುತ್ತೆ ಎಂದು ಆರೋಪಿ ಅಲೆಕ್ಸಾಂಡರ್ ಕೂಡ ಭಾವಿಸಿದ್ದ. ಆದರೆ, ನ್ಯಾಯಾಲಯ 15 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.