– ಪರಸಭೆ ಸದಸ್ಯೆ ನೂಕಾಟ- ತಳ್ಳಾಟ ಪ್ರಕರಣ
– ಶಾಸಕ ಸೇರಿ 31 ಮಂದಿ ವಿರುದ್ಧ ಕೇಸ್ ದಾಖಲು
ಬಾಗಲಕೋಟೆ: ಮಹಾಲಿಂಗಪೂರ ಪುರಸಭೆ ಸದಸ್ಯೆ ತಳ್ಳಾಟ-ನೂಕಾಟ ರಾಜಕೀಯ ದುರುದ್ದೇಶದಿಂದ ನಮ್ಮ ಹೆಸರು ಕೆಡಿಸಲು ನಡೆಸಿದ ಉಮಾಶ್ರೀ ಕುತಂತ್ರವಿದು. ಉಮಾಶ್ರೀಗೆ ಡ್ರಾಮಾ ಬರುತ್ತೆ ಆದರೆ ನನಗೆ ಬರುವುದಿಲ್ಲ ಎಂದು ಮಾಜಿ ಸಚಿವೆ ಉಮಾಶ್ರೀ ವಿರುದ್ಧ ಶಾಸಕ ಸಿದ್ದು ಸವದಿ ವ್ಯಂಗ್ಯವಾಡಿದ್ದಾರೆ.
ಮಹಾಲಿಂಗಪೂರ ಪುರಸಭೆ ಸದಸ್ಯೆ ತಳ್ಳಾಟ ನೂಕಾಟ ಪ್ರಕರಣವಾಗಿ ಶಾಸಕ ಸಿದ್ದು ಸವದಿ ಸೇರಿ 31 ಜನರ ವಿರುದ್ಧ ಕೇಸ್ ದಾಖಲಾಗಿದೆ. ಈ ಹಿನ್ನೆಲೆ ಬಾಗಲಕೋಟೆ ಜಿಲ್ಲೆಯ ರಬಕವಿ ಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ, ರಾಜಕೀಯ ದುರುದ್ದೇಶದಿಂದ ನಮ್ಮ ಹೆಸರು ಕೆಡಿಸಲು ಉಮಾಶ್ರೀ ಕುತಂತ್ರ ಇದಾಗಿದೆ. ಅವರ ನಿರ್ದೆಶನದ ನಾಟಕ ಇದಾಗಿದೆ. ಉಮಾಶ್ರೀಗೆ ಡ್ರಾಮಾ ಬರುತ್ತೆ ಆದರೆ ನನಗೆ ಬರುವುದಿಲ್ಲ. ಯಾವಾಗ ಯಾವ ಪಾತ್ರ ಮಾಡ ಬೇಕೆನ್ನೋದು ಅವರಿಗೆ ಚೆನ್ನಾಗಿ ಗೊತ್ತಿದೆ. ಅಂತಹ ಪಾತ್ರವನ್ನು ಈಗ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಮಹಾಲಿಂಗಪೂರ ಪ್ರಕರಣಕ್ಕೂ ನಮಗೂ ಎಳ್ಳು ಕಾಳಿನಷ್ಟು ಸಂಬಂಧವಿಲ್ಲ. ಕಾಂಗ್ರೆಸ್ಸಿನವರಿಗೆ ದುಡ್ಡು ಹೆಚ್ಚಾಗಿದೆ. ಉಮಾಶ್ರೀ & ನಾಡಗೌಡ ಮಾಡುತ್ತಿರೋ ಕುತಂತ್ರ ಇದಾಗಿದೆ. ನೇರವಾಗಿ ಆಯ್ಕೆಯಾಗಿ ಬರುವಷ್ಟು ಶಕ್ತಿ ಇಲ್ಲ. ಹಿಂಬಾಗಿಲಿನಿಂದ ಅಧಿಕಾರ ಪಡೆಯೋಕೆ ಮುಂದಾಗಿದ್ದರು ಎಂದು ಹೇಳಿದ್ದಾರೆ.
ಪುರಸಭಾ ಸದಸ್ಯೆಗೆ ಗರ್ಭಪಾತ ಆಗಿದೆ ಅನ್ನೋದೆಲ್ಲಾ ಬೋಗಸ್. ಇದು ಸತ್ಯಕ್ಕೆ ದೂರವಾದ ಸಂಗತಿಯಾಗಿದೆ. ನಾವು ಸಹ ಪ್ರಕರಣ ಸಂಬಂಧ 35 ಜನರ ವಿರುದ್ಧ ಕೇಸ್ ದಾಖಲಿಸ್ತೇವೆ. ಜಾತಿ ನಿಂದನೆ ಸೇರಿದಂತೆ ಅವರಂತೆ ನಾವು ಸಹ ಕೇಸ್ ಹಾಕ್ತೇವೆ. ಈ ಗೊಂದಲ ಸೃಷ್ಟಿ ಆಗಿದ್ದು ನಮ್ಮಿಂದಲ್ಲ, ಕಾಂಗ್ರೆಸ್ ನವರಿಂದಾಗಿದೆ. ನಾನು ವಿಪ್ ಕೊಡಲು ನಿಂತಾಗ ಆಕಸ್ಮಿಕವಾಗಿ ನಡೆದ ಘಟನೆ ಇದಾಗಿದೆ. ಉದ್ದೇಶಪೂರ್ವಕವಾಗಿ ಅಲ್ಲ ಎಂದಿದ್ದಾರೆ.
ನೂಕು ನುಗ್ಗಲಿನಲ್ಲಿ ಹೆಣ್ಮಕ್ಕಳು, ಗಂಡು ಮಕ್ಕಳು ಅನ್ನೋದೇ ಬರೋಲ್ಲ. ಆ ಘಟನೆಯಲ್ಲಿ ಎಳೆದುಕೊಂಡು ಬಂದಿದ್ದೇ ಕಾಂಗ್ರೆಸ್ನವರಾಗಿದ್ದಾರೆ. ಆದರೆ ಯಾವುದೇ ಉದ್ದೇಶಪೂರ್ವಕವಾಗಿ ದುರುದ್ದೇಶದಿಂದ ಮಾಡಿದ ಘಟನೆ ಆಗಿರಲಿಲ್ಲ ಎಂದು ಸಿದ್ದು ಸವದಿ ತಿಳಿಸಿದ್ದಾರೆ.