ಬೆಂಗಳೂರು: ರಾಜ್ಯದಲ್ಲಿ ಲವ್ ಜಿಹಾದ್ ವಿಚಾರ ಮತ್ತೆ ಸದ್ದು ಮಾಡ್ತಿದೆ. ಬಿಜೆಪಿ ಆಳ್ವಿಕೆಯ ಉತ್ತರಪ್ರದೇಶ ಹಾಗೂ ಹರ್ಯಾಣ ರಾಜ್ಯಗಳಲ್ಲಿ ಹೊಸ ಕಾನೂನು ಜಾರಿಗೆ ಬರುತ್ತಿರುವ ಹೊತ್ತಲ್ಲೇ, ರಾಜ್ಯದಲ್ಲೂ ಕಠಿಣ ಕಾನೂನು ಜಾರಿಗೆ ಒತ್ತಡ ಜಾಸ್ತಿಯಾಗಿದೆ.
ರಾಜ್ಯದಲ್ಲಿ ಲವ್ ಜಿಹಾದ್ ನಿಯಂತ್ರಣಕ್ಕೆ ಉತ್ತರಪ್ರದೇಶ ಮಾದರಿಯಲ್ಲೇ ಸುಗ್ರೀವಾಜ್ಞೆ ಜಾರಿಗೊಳಿಸುವಂತೆ ಬಿಜೆಪಿ ನಾಯಕರು ಸರ್ಕಾರದ ಮೇಲೆ ಒತ್ತಡ ಹೇರಿದ್ದಾರೆ. ಮಂಗಳೂರಿನಲ್ಲಿ ನಾಳೆ ಬಿಜೆಪಿ ಕಾರ್ಯಕಾರಣಿ ಸಭೆ ನಡೆಯುತ್ತಿದ್ದು, ಕಠಿಣ ಕಾನೂನು ಜಾರಿಗೊಳಿಸುವ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇವೆ.
ಹೊಸ ಕಾನೂನಿನಲ್ಲಿ ಲವ್ ಜಿಹಾದ್ಗೆ ಮಟ್ಟ ಹಾಕುವುದರ ಜೊತೆಗೆ ಮತಾಂತರಗೊಳ್ಳುವ ಸಲುವಾಗಿ ಮದುವೆ ಆಗುವುದನ್ನು ತಡೆಯಲು ನಿರ್ಬಂಧ ಹೇರುವ ಸಾಧ್ಯತೆ ಇವೆ.
ಕಾನೂನಿನಲ್ಲಿ ಏನಿರಲಿದೆ?
ಲವ್ ಜಿಹಾದ್ ಸಾಬೀತಾದರೆ ಶಿಕ್ಷಾರ್ಹ ಅಪರಾಧವಾಗಿದ್ದು 1 ರಿಂದ 3 ವರ್ಷ ಜೈಲು ಶಿಕ್ಷೆ ಸಾಧ್ಯತೆಯಿದೆ. ಅಷ್ಟೇ ಅಲ್ಲದೇ 10 ಸಾವಿರ ರೂ. ದಿಂದ ಆರಂಭಗೊಂಡು 1 ಲಕ್ಷದವರೆಗೆ ದಂಡ ವಿಧಿಸಲು ಅವಕಾಶ. ಡಿಸಿ ನೇತೃತ್ವದಲ್ಲಿ ಬಲವಂತ ಮತಾಂತರ ಪ್ರಕರಣಗಳ ವಿಚಾರಣೆ ನಡೆಸಲು ಅವಕಾಶ ನೀಡುವ ಅಂಶ ಇರುವ ಸಾಧ್ಯತೆಯಿದೆ.
ಅಲಹಾಬಾದ್ ಹೈಕೋರ್ಟ್ ಏನು ಹೇಳಿದೆ?
ಲವ್ ಜಿಹಾದ್ ಸಂಬಂಧ ಸೆಪ್ಟೆಂಬರ್ 23ರಂದು ಅಲಹಾಬಾದ್ ಹೈಕೋರ್ಟ್ ತೀರ್ಪೋಂದನ್ನು ನೀಡಿತ್ತು. ಖುರಾನ್ನಲ್ಲಿನ ಒಂದು ಅಂಶವನ್ನು ಉಲ್ಲೇಖಿಸಿ, ಮದುವೆಯ ಉದ್ಧೇಶಕ್ಕಾಗಿ ಮತಾಂತರವಾದರೆ ಅದು ಸ್ವೀಕೃತವಲ್ಲ ಎಂದು ಹೇಳಿತ್ತು. ಈ ಆದೇಶವನ್ನೇ ಮುಂದಿಟ್ಟುಕೊಂಡು ಉತ್ತರಪ್ರದೇಶ ಸರ್ಕಾರ ಹೊಸ ಕಾನೂನಿಗೆ ಮುಂದಾಗಿದೆ.
ಕೇರಳದ ಹಾದಿಯಾ ಪ್ರಕರಣ ಉಲ್ಲೇಖಿಸಿದ ಕೋರ್ಟ್ ಕೇವಲ ಮದುವೆಗಾಗಿ ಮತಾಂತರ ಆಗುವಂತಿಲ್ಲ. ಮಹಿಳೆಯು ಮತಾಂತರಗೊಂಡ ಒಂದು ತಿಂಗಳಲ್ಲೇ ವಿವಾಹ ನಡೆದಿದೆ. ವಿವಾಹದ ಉದ್ದೇಶದಿಂದಲೇ ಮಹಿಳೆ ಮತಾಂತರವಾಗಿದ್ದಾಳೆ. ಇಸ್ಲಾಂ ಬಗ್ಗೆ ಜ್ಞಾನವಿಲ್ಲದೆ, ನಂಬಿಕೆ ಇಲ್ಲದೆ ಮತಾಂತರವಾಗುವಂತಿಲ್ಲ. ವಿವಾಹದ ಉದ್ದೇಶಕ್ಕಾಗಿ ಮತಾಂತರವದರೆ ಸ್ವೀಕೃತವಲ್ಲ ಎಂದು ಖುರಾನ್ನಲ್ಲಿ ಉಲ್ಲೇಖವಾಗಿರುವ ಈ ಮದುವೆ ಹೇಗೆ ಸ್ವೀಕೃತವಾಗುತ್ತದೆ ಎಂದು ಪ್ರಶ್ನಿಸಿದೆ.