ಉಡುಪಿ: ಜಿಲ್ಲೆಯ ಡಿಸಿ ಜಿ.ಜಗದೀಶ್ ಅವರ ಹೆಸರಿನಲ್ಲಿ ನಕಲಿ ಖಾತೆ ತೆರೆದು ಖದೀಮರು ಏಳು ಸಾವಿರ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿರುವ ವಿಚಾರ ಬೆಳಕಿಗೆ ಬಂದಿದೆ.
ಉಡುಪಿ ಡಿಸಿ ಜಿ ಜಗದೀಶ್ ಈ ಬಗ್ಗೆ ಫೇಸ್ಬುಕ್ನಲ್ಲಿ ಸ್ಪಷ್ಟನೆ ನೀಡಿದ್ದು, ನನ್ನ ಹೆಸರಿನಲ್ಲಿ ನಕಲಿ ಫೇಸ್ಬುಕ್ ಖಾತೆ ಓಪನ್ ಆಗಿದೆ ಎಂದು ಬರೆದುಕೊಡಿದ್ದಾರೆ. ನಾನು ಪೊಲೀಸರಿಗೆ ದೂರು ನೀಡಿದ್ದೇನೆ. ನನ್ನ ಖಾತೆಯಿಂದ ಯಾರಾದರೂ ಹಣಕ್ಕೆ ಬೇಡಿಕೆ ಇಟ್ಟರೆ ಅದಕ್ಕೆ ಯಾರೂ ಸ್ಪಂದಿಸಬೇಡಿ ಎಂದು ವಿನಂತಿ ಮಾಡಿದ್ದಾರೆ. ಜಗದೀಶ್ ಮಲಾಲಗದ್ದೆ ಎಂಬ ಹೆಸರಿನಲ್ಲಿ ಖದೀಮರು 7000 ರುಪಾಯಿ ಹಣಕ್ಕೆ ಬೇಡಿಕೆ ಇಟ್ಟಿರುವ ಸ್ಕ್ರೀನ್ ಶಾಟ್ ಗಳನ್ನು ಡಿಸಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.
ನನ್ನ ಕುಟುಂಬಸ್ಥರಿಗೆ ಹಣಕಾಸಿನ ಅಗತ್ಯ ಇದೆ ನಾನು ಒಂದು ನಂಬರ್ ಕಳುಹಿಸುತ್ತೇನೆ ಅದಕ್ಕೆ ಆನ್ಲೈನ್ ಮೂಲಕ ಹಣ ರವಾನೆ ಮಾಡಿ ಎಂದು ಖದೀಮ ಮೆಸೇಜ್ ಮಾಡಿದ್ದಾನೆ. ಉಡುಪಿ ಜಿಲ್ಲೆಯಲ್ಲಿ ಕಳೆದ ಒಂದೆರಡು ತಿಂಗಳ ಹಿಂದಿನಿಂದ ಜಿಲ್ಲೆಯ ಹಲವು ಪೊಲೀಸ್ ಅಧಿಕಾರಿಗಳ ಹೆಸರಿನಲ್ಲಿ ನಕಲಿ ಫೇಸ್ಬುಕ್ ಖಾತೆ ಓಪನ್ ಮಾಡಿ ಇದೇ ರೀತಿ ಹಣಕ್ಕೆ ಬೇಡಿಕೆ ಇಡುವ ಪ್ರಕರಣಗಳು ನಡೆದಿತ್ತು. ಇದೀಗ ಡಿಸಿ ಅವರಿಗೂ ಅದೇ ರೀತಿ ಮಾಡಿರುವುದು ಬೆಳಕಿಗೆ ಬಂದಿದೆ.