– ಓರ್ವ ಪೊಲೀಸ್, ಉಳಿದೆಲ್ಲ ಮುಂಬೈ ಕೇಸ್
ಉಡುಪಿ: ಮಹಾರಾಷ್ಟ್ರದಿಂದ ಬಂದ ಜನರೇ ಕೃಷ್ಣನಗರಿಗೆ ಕಂಟಕವಾಗಿದ್ದಾರೆ. ಉಡುಪಿಯಲ್ಲಿ ಇಂದು ಕೊರೊನಾ ದ್ವಿಶತಕವನ್ನೇ ಬಾರಿಸಿದೆ. ಜಿಲ್ಲೆಯಲ್ಲಿ 204 ಜನರಲ್ಲಿ ಇಂದು ಕೋವಿಡ್ 19 ಸೋಂಕು ಕಾಣಿಸಿಕೊಂಡಿದೆ.
ಉಡುಪಿ ಜಿಲ್ಲೆಯ ಕೊರೊನಾ ಪೀಡಿತರ ಒಟ್ಟು ಸಂಖ್ಯೆ 768ಕ್ಕೆ ಏರಿಕೆಯಾಗಿದೆ. ಉಡುಪಿ ಕೊರೊನಾ ಪಾಸಿಟಿವ್ ನಲ್ಲಿ ರಾಜ್ಯದಲ್ಲೇ ನಂಬರ್ ಒನ್ ಸ್ಥಾನದಲ್ಲಿದೆ. ಮಹಾರಾಷ್ಟ್ರದಿಂದ ಬಂದು ಗಂಟಲ ಮಾದರಿ ಕೊಟ್ಟು ಸರ್ಕಾರಿ ಕ್ವಾರಂಟೈನ್ ಮುಗಿಸಿ ಹೋಮ್ ಕ್ವಾರಂಟೈನ್ ನಲ್ಲಿ ಇದ್ದವರಿಗೆ ಸೋಂಕು ಅಂಟಿದೆ. ಈಗಾಗಲೇ ಜಿಲ್ಲೆಯಲ್ಲಿ ಒಟ್ಟು 732 ಮಂದಿ ಸೋಂಕಿತರು ಮಹಾರಾಷ್ಟ್ರದಿಂದ ಬಂದವರೇ ಆಗಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಉಡುಪಿ ಜಿಲ್ಲಾಧಿಕಾರಿ, 2000ಕ್ಕಿಂತ ಹೆಚ್ಚು ಸ್ಯಾಂಪಲ್ ಪರೀಕ್ಷೆಗೆ ಒಳಪಡಿಸಲಾಗಿದೆ. ಸೋಂಕಿತರ ಪೈಕಿ ಓರ್ವ ಸ್ಥಳೀಯ ಪೊಲೀಸ್ ಸಿಬ್ಬಂದಿ ಇದ್ದಾರೆ. ಚೆಕ್ ಪೋಸ್ಟ್ ನಲ್ಲಿ ಪೊಲೀಸ್ ಸಿಬ್ಬಂದಿ ಕಾರ್ಯ ನಿರ್ವಹಿಸಿದ್ದರು, ಇಲಾಖಾ ಸಿಬ್ಬಂದಿಗಳ ಚೆಕಪ್ ವೇಳೆ ಇವರಲ್ಲಿ ಕೊರೊನಾ ಪತ್ತೆಯಾಗಿದೆ ಎಂದು ಮಾಹಿತಿ ನೀಡಿದರು.
ಜಿಲ್ಲೆಗೆ ಬಂದ 8 ಸಾವಿರ ಜನರ ಗಂಟಲ ದ್ರವ ಪರೀಕ್ಷೆ ಮುಗಿದಿದೆ. ಇಂದು ಸಂಜೆಯೊಳಗೆ ಮಾದರಿ ಸಂಗ್ರಹಿಸಿದ ಎಲ್ಲಾ ಟೆಸ್ಟ್ ಮುಗಿಯುತ್ತದೆ. ಆ ಬಳಿಕ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಇಳಿಮುಖವಾಗಲಿದೆ. ಆಮೇಲೆ ತೀವ್ರ ಉಸಿರಾಟದ ತೊಂದರೆ ಬಗ್ಗೆ ನಿಗಾ ಇಡಲಾಗುತ್ತದೆ ಎಂದರು.