ಚಿಕ್ಕಮಗಳೂರು: ಉಗ್ರರಿಗೆ ಬಿರಿಯಾನಿ ನೀಡುವ ರಾಜಕಾರಣ ವ್ಯವಸ್ಥೆ ಈಗ ಇಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರದಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.
ಚಿಕ್ಕಮಗಳೂರಿನಲ್ಲಿ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ರಾಜ್ಯದ ಉಸ್ತುವಾರಿ ಅರುಣ್ ಸಿಂಗ್ ಇದ್ದಾರೆ. ಅವರು ಸಮರ್ಥರಿದ್ದಾರೆ. ಅವರು ಮುಖ್ಯಮಂತ್ರಿ ಹಾಗೂ ರಾಜ್ಯಾಧ್ಯಕ್ಷರ ಜೊತೆ ಸಮಾಲೋಚನೆ ನಡೆಸಲಿದ್ದಾರೆ. ಪಕ್ಷಕ್ಕೆ ಅವರೇ ಸೂಕ್ತ ಸಲಹೆ ನೀಡುತ್ತಾರೆ. ನಾನು ರಾಜ್ಯ ರಾಜಕಾರಣದ ಬಗ್ಗೆ ಮಾತನಾಡುವುದಿಲ್ಲ. ಎಲ್ಲದೂ ಮುಖ್ಯಮಂತ್ರಿ ಹಾಗೂ ಪಕ್ಷದ ವರಿಷ್ಠರಿಗೆ ಬಿಟ್ಟ ವಿಚಾರ ಎಂದರು.
ಇದೇ ವೇಳೆ ಮಂಗಳೂರಿನಲ್ಲಿ ಗೋಡೆಮೇಲಿನ ದೇಶದ್ರೋಹದ ಬರವಣಿಗೆ ಕುರಿತಂತೆ ಪ್ರತಿಕ್ರಿಯೆ ನೀಡಿದ ಸಿ.ಟಿ.ರವಿ, ಉಗ್ರವಾದಿಗಳಿಗೆ ನಮ್ಮ ದೇಶದಲ್ಲಿ ಜಾಗವಿಲ್ಲ. ಕಾಶ್ಮೀರದಲ್ಲೇ ತಲೆ-ಬಾಲ ಕತ್ತರಿಸಿದ್ದೇವೆ. ಇಲ್ಲಿ ಬಾಲ ಬಿಚ್ಚಿದ್ರೆ ಬಾ; ಮಾತ್ರವಲ್ಲ, ಉಳಿದಿದ್ದನ್ನೂ ಕಟ್ ಮಾಡ್ತೇವೆ ಎಂದರು. ಉಗ್ರವಾದಿಗಳು ಹೋಗಬೇಕಿರೋದು ಮಸಣಕ್ಕೆ ಮಾತ್ರ. ಉಗ್ರರನ್ನ ಮಸಣಕ್ಕೆ ಕಳಿಸುವ ಕೆಲಸವನ್ನ ಪೊಲೀಸರು ಹಾಗೂ ಸೈನಿಕರು ಸಮರ್ಥವಾಗಿ ಮಾಡಿದ್ದಾರೆ. ಉಗ್ರವಾದಿಗಳಿಗೆ ಬಿರಿಯಾನಿ ಕೊಡೋ ಕಾಲ ಹೋಯ್ತು. ಅವರಿಗೆ ಬಿರಿಯಾನಿ ನೀಡುವ ರಾಜಕಾರಣದ ವ್ಯವಸ್ಥೆ ಈಗಿಲ್ಲ. ಅವರಿಗೆ ಮಣಿ ಹಾಕಿ, ಅವರು ಹೇಳಿದಂತೆ ಕೇಳುವ ರಾಜಕೀಯ ವ್ಯವಸ್ಥೆಯೂ ಈಗಿಲ್ಲ. ಈಗ ಅವರಿಗೆ ಅವರದ್ದೇ ಭಾಷೆಯಲ್ಲಿ ಉತ್ತರ ಕೊಡೋ ಕಾಲ ಎಂದು ಎಚ್ಚರಿಸಿದ್ರು.
ದೇಶದ್ರೋಹಿ ಚಟುವಟಿಕೆಯನ್ನ ನಾವು ಒಪ್ಪಲ್ಲ. ಅದನ್ನ ಸಹಿಸುವ ಹಾಗೂ ಒಪ್ಪುವ ವ್ಯವಸ್ಥೆಯೂ ಈಗಿಲ್ಲ. ಸಿಎಂ ಆಪ್ತ ಸಂತೋಷ್ ಆತ್ಮಹತ್ಯೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಕೆಶಿಯವರ ಹೇಳಿಕೆಗೆ ಟಾಂಗ್ ಕೊಟ್ಟ ಸಿ.ಟಿ.ರವಿ, ತಮ್ಮದೇ ಪಕ್ಷದ ದಲಿತ ಶಾಸಕನ ಮನೆಗೆ ಬೆಂಕಿ ಹಾಕಿರೋರನ್ನ ಅವರ ರಕ್ಷಣೆಯ ಪರ ಮಾತನಾಡ್ತೀರಾ ಎಂದರು. ಸಂತ್ರಸ್ತ ಶಾಸಕ ದೂರು ನೀಡಿದ್ದಾರೆ. ಅವರ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ. ಇದು ಪ್ರಾಥಮಿಕ ತನಿಖೆ ಹಂತದಲ್ಲಿದೆ. ತನಿಖೆಯ ನಂತರವಷ್ಟೆ ಗೊತ್ತಾಗಬೇಕು ಎಂದರು. ತನಿಖೆಗೂ ಮುಂಚೆಯೇ ಆರೋಪ ಮಾಡಲು ಮುಂದಾಗುತ್ತೀರಾ. ಈಗ ದೂರು ಬಂದಿದೆಯಲ್ಲಾ ಅಲ್ಲಿ ಯಾಕೆ ಅಸಹಾಯಕರಾಗಿದ್ದೀರಾ. ಯಾಕೆ ರಕ್ಷಣೆ ಮಾಡ್ತೀದ್ದೀರಾ ಎಂದು ಡಿಕೆಶಿಗೆ ಟಾಂಗ್ ಕೊಟ್ಟಿದ್ದಾರೆ.