– ಪ್ರತಿ ಪಂದ್ಯಕ್ಕೂ ಬೇಕಿದೆ 75,000 ಲೀಟರ್ ನೀರು
ಬೆಂಗಳೂರು: ಏಷ್ಯಾದಲ್ಲೇ ಅತಿ ಹೆಚ್ಚು ಸಂಸ್ಕರಿಸಿದ ನೀರಿನ ಮರುಬಳಕೆಯ ಖ್ಯಾತಿಯನ್ನು ಬೆಂಗಳೂರು (Bengaluru) ನಗರ ಪಡೆದಿದೆ. ಸಂಸ್ಕರಿಸಿದ ನೀರಿನ ಮರುಬಳಕೆಯ ಬಗ್ಗೆ ಇನ್ನಷ್ಟು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ಬಾರಿಯ ಐಪಿಎಲ್ (IPL) ಪಂದ್ಯದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ (Chinnaswamy Stadium) ಬೆಂಗಳೂರು ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯು ಸಂಸ್ಕರಿಸಿದ ನೀರನ್ನು ಸರಬರಾಜು ಮಾಡಲಿದೆ ಎಂದು ಜಲಮಂಡಳಿ ಅಧ್ಯಕ್ಷ ಡಾ.ರಾಮ್ ಪ್ರಸಾತ್ ಮನೋಹರ್ ತಿಳಿಸಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಳೆದ ಬಾರಿ ಬೆಂಗಳೂರು ನಗರದಲ್ಲಿ ನೀರಿನ ಸಮಸ್ಯೆ ತೀವ್ರವಾದಾಗ ಸಂಸ್ಕರಿಸಿದ ನೀರಿನ ಬಳಕೆಗೆ ಉತ್ತೇಜನ ನೀಡಲಾಗಿತ್ತು. ಈ ಬಾರಿಯೂ ಐಐಎಸ್ಸಿ ವಿಜ್ಞಾನಿಗಳು ಅಂತರ್ಜಲ ಕುಸಿತದಿಂದ ನೀರಿನ ಕೊರತೆ ಉಂಟಾಗಲಿರುವ ಬಗ್ಗೆ ಮುನ್ಸೂಚನೆ ನೀಡಿದ್ದಾರೆ. ಈ ಹಿನ್ನಲೆಯಲ್ಲಿ ಬೆಂಗಳೂರು ಜಲಮಂಡಳಿ ಸಂಸ್ಕರಿಸಿದ ನೀರಿನ ಮರುಬಳಕೆಯ ಬಗ್ಗೆ ಸಾಕಷ್ಟು ಜಾಗೃತಿಯನ್ನು ಮೂಡಿಸಲು ಮುಂದಾಗಿದೆ. ಕುಡಿಯುವ ಹಾಗೂ ಅಡುಗೆಗೆ ಹೊರತುಪಡಿಸಿ ಬಹಳಷ್ಟು ದಿನನಿತ್ಯದ ಚಟುವಟಿಕೆಗಳಿಗೆ ಸಂಸ್ಕರಿಸಿದ ನೀರನ್ನು ಬಳಸಬಹುದಾಗಿದೆ ಎಂದರು. ಇದನ್ನೂ ಓದಿ: ಕಾಪು ಹೊಸ ಮಾರಿಗುಡಿಗೆ ರಕ್ಷಿತ್ ಶೆಟ್ಟಿ ಭೇಟಿ
ದೇಶದ ಗಮನ ಸೆಳೆಯುವಂತಹ ಐಪಿಎಲ್ ಕ್ರೀಡಾಕೂಟಕ್ಕೆ ಅಗತ್ಯವಿರುವ ನೀರಿನ ಅವಶ್ಯಕತೆಯನ್ನು ಪೂರೈಸುವ ನಿಟ್ಟಿನಲ್ಲಿ ಸಂಸ್ಕರಿಸಿದ ನೀರನ್ನು ಸರಬರಾಜು ಮಾಡುವುದರಿಂದ ದೇಶಾದ್ಯಂತ ಇನ್ನಷ್ಟು ಸಂಸ್ಕರಿಸಿದ ನೀರಿನ ಮರುಬಳಕೆಯ ಬಗ್ಗೆ ಹೆಚ್ಚಿನ ಪ್ರಚಾರವಾಗಲಿದೆ. ಈ ಹಿನ್ನಲೆಯಲ್ಲಿ ಈ ಬಾರಿಯೂ ಬೆಂಗಳೂರು ಜಲಮಂಡಳಿ ಸಂಸ್ಕರಿಸಿದ ನೀರಿನ ಸರಬರಾಜು ಮಾಡಲಿದೆ ಎಂದು ತಿಳಿಸಿದರು. ಇದನ್ನೂ ಓದಿ: ಜಾರ್ಖಂಡ್ | ಪಟಾಕಿ ಅಂಗಡಿ ಧಗ ಧಗ – 3 ಮಕ್ಕಳು ಸೇರಿ ಐವರು ಸಜೀವ ದಹನ
ಪಂದ್ಯಾವಳಿಗಳ ಸಂದರ್ಭದಲ್ಲಿ ಪ್ರತಿನಿತ್ಯ ಸುಮಾರು 75,000 ಲೀಟರ್ಗಳಷ್ಟು ನೀರಿನ ಅವಶ್ಯಕತೆ ಬೀಳುತ್ತದೆ. ಇದಕ್ಕಾಗಿ ಕಬ್ಬನ್ ಪಾರ್ಕ್ ತ್ಯಾಜ್ಯ ನೀರು ಸಂಸ್ಕರಣ ಘಟಕದಿಂದ ಅಗತ್ಯ ನೀರನ್ನು ದೊರಕಿಸಿ ಕೊಡುವಂತೆ ಕೆಎಸ್ಸಿಎ ಪದಾಧಿಕಾರಿಗಳು ಮಾಡಿದ್ದ ಮನವಿಗೆ ಸ್ಪಂದಿಸಿ, ಕಳೆದ ವರ್ಷದಿಂದ ಸಂಸ್ಕರಿಸಿದ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಇದೇ ವ್ಯವಸ್ಥೆಯನ್ನು ಈ ಬಾರಿಯೂ ಮುಂದುವರೆಸುವುದಾಗಿ ಅಧ್ಯಕ್ಷರು ಹೇಳಿದರು. ಇದನ್ನೂ ಓದಿ: ಎಕ್ಸ್ ಸರ್ವರ್ ಡೌನ್ – ಭಾರತ ಸೇರಿ ಜಾಗತಿಕ ಮಟ್ಟದಲ್ಲಿ ಕೈಕೊಟ್ಟ ಸೋಶಿಯಲ್ ಮೀಡಿಯಾ