– 56 ಲಕ್ಷ, 40 ಕಾರು, 65 ಮೊಬೈಲ್ ಜಪ್ತಿ
ಧಾರವಾಡ: ಧಾರವಾಡ ಜಿಲ್ಲಾ ಪೊಲೀಸರು ಇಸ್ಪೇಟ್ ಅಡ್ಡೆಯ ಮೇಲೆ ದಾಳಿ ಮಾಡಿದ್ದು, 126 ಜನರ ಮೇಲೆ ಕೇಸ್ ದಾಖಲಿಸಿ, 56 ಲಕ್ಷ ನಗದು, 40 ಕಾರು ಹಾಗೂ 65 ಮೊಬೈಲ್ ಜಪ್ತಿ ಮಾಡಿರುವ ಘಟನೆ ಧಾರವಾಡದಲ್ಲಿ ನಡೆದಿದೆ.
ಧಾರವಾಡ ಹೊರವಲಯದ ರಮ್ಯಾ ರೆಸಿಡೆನ್ಸಿ ಹಾಗೂ ಪ್ರೀತಿ ರೆಸಿಡೆನ್ಸಿಯ ಮೇಲೆ ದಾಳಿ ನಡೆಸಿದ ಜಿಲ್ಲಾ ಪೊಲೀಸರು, ಅಂದರ್ ಬಾಹರ್ ಆಡುತಿದ್ದವರನ್ನು ವಶಕ್ಕೆ ಪಡೆದಿದ್ದಾರೆ. ಈ ಪ್ರಕರಣದಲ್ಲಿ ಕೈ ಮತ್ತು ಕಮಲದ ಮುಖಂಡರೂ ಕೂಡಾ ಸಿಕ್ಕಿ ಹಾಕಿಕೊಂಡಿದ್ದು, ಬಿಜೆಪಿ ಮುಖಂಡ ತವನಪ್ಪ ಅಷ್ಟಗಿ ಹಾಗೂ ಕಾಂಗ್ರೆಸ್ ಮುಖಂಡ ಇಸ್ಮಾಯಿಲ್ ತಮಾಟಗಾರ ಪೊಲೀಸ್ ಬಲೆಗೆ ಬಿದ್ದಿದ್ದಾರೆ.
ಸದ್ಯ ಇವರ ಮೇಲೆ ಕೇಸ್ ದಾಖಲಿಸಿರುವ ಗ್ರಾಮೀಣ ಪೊಲೀಸರು, ಎರಡು ರೆಸಿಡೆನ್ಸಿಯಲ್ಲಿರುವ ಟೆಬಲ್ ಹಾಗೂ ಚೇರ್ ಗಳನ್ನು ವಶಕ್ಕೆ ಪಡೆದಿದ್ದಾರೆ. ಆದರೆ ಸಿಕ್ಕಿ ಬಿದ್ದಿರುವ ಬಿಜೆಪಿ ಮುಖಂಡ ತವನಪ್ಪ ಅಷ್ಟಗಿ ಪ್ರತಿಕ್ರಿಯೆ ನೀಡಿದ್ದು, ಪ್ರತಿ ವರ್ಷದಂತೆ ಈ ಬಾರಿ ಕೂಡ ನಾವು ದೀಪಾವಳಿ ಹಬ್ಬದ ಹಿನ್ನೆಲೆ ರಮ್ಯಾ ರೆಸಿಡೆನ್ಸಿಗೆ ಊಟಕ್ಕೆ ಹೋಗಿದ್ದು, ಅಲ್ಲೇ ಲೈಸೆನ್ಸ್ ಇರುವ ಅಧಿಕೃತ ಕ್ಲಬ್ನಲ್ಲಿ ಆಟವಾಡುತಿದ್ದೆವು. ಇದರಲ್ಲಿ ಪೊಲೀಸರ ಸಂಚು ಇದೆ ಎಂದಿದ್ದಾರೆ.
ಇದಕ್ಕೆ ಉತ್ತರ ನೀಡಿರುವ ಉತ್ತರ ವಲಯದ ಐಜಿ ರಾಘವೇಂದ್ರ ಸುಹಾಸ್, ನಮ್ಮ ಕಡೆ ಅಂದರ್ ಬಾಹರ್ ಆಡುತಿದ್ದ ದಾಖಲೆ ಇದೆ ಎಂದಿದ್ದಾರೆ. ಸದ್ಯ ಇಸ್ಪೇಟ್ ಆಡುತಿದ್ದವರನ್ನು ಬೇಲ್ ಮೇಲೆ ಬಿಡುಗಡೆ ಮಾಡಲಾಗಿದೆ.