ಶಿವಮೊಗ್ಗ: ಕೇಂದ್ರದ ನಾಯಕರು ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಗ್ಗೆ ವಿಶ್ವಾಸವಿದ್ದರೆ ಸಂಪುಟದಲ್ಲಿ ಇರಿ. ಇಲ್ಲದಿದ್ದರೆ ರಾಜೀನಾಮೆ ಕೊಟ್ಟು ಹೊರಗೆ ಹೋಗಿ. ಸುಖಾ ಸುಮ್ಮನೆ ಪಕ್ಷದಲ್ಲಿ ಗೊಂದಲ ಸೃಷ್ಟಿ ಮಾಡಬೇಡಿ ಎಂದು ಸಚಿವ ಯೋಗೇಶ್ವರ್ಗೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಸಚಿವರು, ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ. ಪಕ್ಷದ ಎಲ್ಲ ಶಾಸಕರು, ಮಂತ್ರಿಗಳು ಕಲ್ಲು ಬಂಡೆಯ ರೀತಿಯಲ್ಲಿ ಇದ್ದೇವೆ. ಸಿ.ಪಿ.ಯೋಗೀಶ್ವರ್ ಅವರು ದೆಹಲಿಗೆ ಹೋಗಿ ಬಂದ ಮೇಲೆ ಮಾಧ್ಯಮದ ಎದುರು ಬಂದಿದ್ದು ತಪ್ಪು. ಹೈಕಮಾಂಡ್ಗೆ ದೂರು ನೀಡಿದ ಮೇಲೆ ಅವರು ಗಮನಿಸುವವರೆಗೂ ಸುಮ್ಮನಿರಬೇಕು ಎಂದರು.
ಪಕ್ಷದ ನಾಯಕತ್ವದ ಬಗ್ಗೆ ಒಬ್ಬಿಬ್ಬರು ಮಾತನಾಡುತ್ತಿದ್ದಾರೆ. ಪಕ್ಷದಲ್ಲಿ ಏನಾದರೂ ಸಮಸ್ಯೆ ಇದ್ದರೆ ಅದನ್ನು ನಾಲ್ಕು ಗೋಡೆ ಮಧ್ಯೆ ಹೇಳಿಕೊಳ್ಳಲು ಅವಕಾಶ ಇದೆ. ಪಕ್ಷದಲ್ಲಿ ಯಾವುದೇ ಸರ್ವಾಧಿಕಾರ ಇಲ್ಲ. ಆದರೆ ನಿಮಗೆ ಸಂತೋಷ ಇದ್ದರೆ ಕ್ಯಾಬಿನೆಟ್ ನಲ್ಲಿರಿ ಇಲ್ಲದಿದ್ದರೆ ರಾಜೀನಾಮೆ ಕೊಟ್ಟು ಹೊರ ಹೋಗಿ. ಕೋವಿಡ್ ಸಂಕಷ್ಟದ ಸಮಯದಲ್ಲಿ ರಾಜ್ಯ ಸರ್ಕಾರ ಸೇರಿದಂತೆ ಎಲ್ಲರೂ ಸೋಂಕು ದೂರ ಮಾಡಲು ಶ್ರಮಿಸುತ್ತಿದ್ದಾರೆ. ಆದರೆ ಇಂತಹ ಸಂದರ್ಭದಲ್ಲಿ ನೀವು ಯಾಕೆ ನಾಯಕತ್ವ ಬದಲಾವಣೆ ಬಗ್ಗೆ ಮಾತನಾಡುತ್ತೀರಾ ಎಂದು ಸಚಿವ ಈಶ್ವರಪ್ಪ ಪ್ರಶ್ನಿಸಿದರು.