ಬೆಂಗಳೂರು: ದೇವರಜೀವನಹಳ್ಳಿ ಮತ್ತು ಕಾಡುಗೊಂಡನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಗಲಭೆ ಪ್ರಕರಣದಲ್ಲಿ ಕಾಂಗ್ರೆಸ್, ಎಸ್ಡಿಪಿಐ ಮುಖಂಡರು ಪರಸ್ಪರ ಫೋನ್ ಸಂಪರ್ಕದಲ್ಲಿದ್ದ ವಿಚಾರ ಈಗ ಬೆಳಕಿಗೆ ಬಂದಿದೆ.
ಹೌದು. ಪ್ರಕರಣ ತನಿಖೆ ನಡೆಸುತ್ತಿರುವ ಪೊಲೀಸರು ಎಸ್ಡಿಪಿಐ ಸಕ್ರಿಯ ಕಾರ್ಯಕರ್ತ ಮುಜಾಮಿಲ್ ಪಾಷಾನ ಮೊಬೈಲ್ ಕರೆಗಳನ್ನು ಪರಿಶೀಲಿಸುವ ಸಂದರ್ಭದಲ್ಲಿ ಒಂದು ನಂಬರ್ಗೆ ಪದೇ ಪದೇ ವಾಟ್ಸಪ್ ಕಾಲ್ ಹೋಗಿರುವುದು ಗೊತ್ತಾಗಿದೆ. ರಾತ್ರಿ 9:30 ರಿಂದ 11:30ರ ಅವಧಿಯಲ್ಲಿ ಒಟ್ಟು 11 ಬಾರಿ ಕರೆ ಹೋಗಿದ್ದು,ಈ ನಂಬರ್ ಯಾವುದು ಎಂದು ಪರಿಶೀಲನೆ ನಡೆಸಿದಾಗ ಅರುಣ್ ಎಂಬಾತನದ್ದು ಎಂಬುದು ತಿಳಿದು ಬಂದಿದೆ. ಇದನ್ನೂ ಓದಿ: 4 ತಿಂಗಳ ಅಂತರದಲ್ಲಿ ಎರಡು ಮಕ್ಕಳು ಹೇಗೆ ಸಾಧ್ಯ – ಪ್ರಥಮ್ ವಿರುದ್ಧ ಕೇಸ್ ದಾಖಲು
ಅರುಣ್ ಬೇರೆ ಯಾರು ಅಲ್ಲ ಈತ ಮಾಜಿ ಬಿಬಿಎಂಪಿ ಮೇಯರ್ ಸಂಪತ್ ರಾಜ್ ಆಪ್ತ, ಕಾಂಗ್ರೆಸ್ನ ಸಕ್ರೀಯ ಕಾರ್ಯಕರ್ತ. ಈ ಗಲಭೆಯಲ್ಲಿ ಅರುಣ್ ಪಾತ್ರ ಇರುವುದು ತಿಳಿದು ಬರುತ್ತಿದ್ದತೆ ಸಿಸಿಬಿ ಪೊಲೀಸರು ಸೋಮವಾರ ರಾತ್ರಿಯೇ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ಬಂಧಿಸಿದ್ದಾರೆ.
ತನಿಖೆಯ ವೇಳೆ ಇನ್ನೊಂದು ಟ್ವಿಸ್ಟ್ ಸಿಕ್ಕಿದ್ದು, ಫೋನಿನಲ್ಲಿ ಮುಜಾಮಿಲ್ ಪಾಷಾನೊಂದಿಗೆ ಅರುಣ್ ಮಾತನಾಡಿದರೆ ಜೊತೆಯಲ್ಲೇ ಇನ್ನೊಬ್ಬ ವ್ಯಕ್ತಿಯೂ ಮಾತನಾಡಿದ್ದಾರೆ. ಈ ವ್ಯಕ್ತಿಯ ಧ್ವನಿ ಸಂಪತ್ ರಾಜ್ ಧ್ವನಿಯಂತೆ ಹೋಲಿಕೆ ಇರುವ ಕಾರಣ ಅವರಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆ ನಡೆಸುತ್ತಿದ್ದಾರೆ
ತನ್ನ ಫೋನ್ ನಂಬರ್ ಬಳಸಿದ್ರೆ ತನಗೆ ಸಮಸ್ಯೆಯಾಗಬಹುದು ಎಂಬ ಕಾರಣಕ್ಕೆ ಸಂಪತ್ ರಾಜ್ ಅರುಣ್ ಫೋನ್ ಬಳಸಿದ್ರಾ? ಇದರ ಜೊತೆ ಗಲಭೆ ಇನ್ನಷ್ಟು ದೊಡ್ಡದಾಗೋ ಸಂಪತ್ ರಾಜ್ ಮಾಡಿದ್ರಾ ಎಂಬ ಪ್ರಶ್ನೆ ಎದ್ದಿದೆ. ಧ್ವನಿ ಸಂಪತ್ ರಾಜ್ ಅವರದ್ದೇ ಎನ್ನುವುದು ಪೊಲೀಸ್ ಮೂಲಗಳ ಮಾಹಿತಿ. ಆದರೂ ಈ ಬಗ್ಗೆ ಪೂರ್ಣವಾದ ಸಾಕ್ಷ್ಯ ಸಂಗ್ರಹಿಸಲು ಸಂಪತ್ ರಾಜ್ ಅವರನ್ನು ಪೊಲೀಸರು ಈಗ ವಿಚಾರಣೆ ನಡೆಸುತ್ತಿದ್ದಾರೆ.
ವಿಚಾರಣೆ ವೇಳೆ ಸಂಪತ್ ರಾಜ್ ಬಗ್ಗೆ ಅರುಣ್ ಸ್ಫೋಟಕ ಮಾಹಿತಿಗಳನ್ನು ತಿಳಿಸಿದ್ದು, ಇಂದೇ ಸಂಪತ್ ರಾಜ್ ಬಂಧನವಾಗುವ ಸಾಧ್ಯತೆಯಿದೆ.