ಬೆಂಗಳೂರು: ಪಾದರಾಯನಪುರದ ಕಾರ್ಪೊರೇಟರ್ ಇಮ್ರಾನ್ ಪಾಷಾ ಬೆಂಬಲಿಗನೊಬ್ಬನಿಗೆ ಕೊರೊನಾ ವೈರಸ್ ದೃಢಪಟ್ಟಿದೆ.
ಕೋವಿಡ್-19 ಸೋಂಕಿಗೆ ಒಳಗಾಗಿದ್ದ ಇಮ್ರಾನ್ ಪಾಷಾ ಹೈಡ್ರಾಮಾ ಸೃಷ್ಟಿಸಿ ಆಸ್ಪತ್ರೆ ಸೇರಿದ್ದರು. ಚಿಕಿತ್ಸೆ ಫಲಿಸಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಅವರನ್ನು ಅದ್ದೂರಿಯಾಗಿ ಬೆಂಬಲಿಗರು ಸ್ವಾಗತ ಮಾಡಿಕೊಂಡಿದ್ದರು. ಈ ಸಂಬಂಧ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಲಾಕ್ಡೌನ್ ನಿಮಯ ಉಲ್ಲಂಘಿಸಿದ ಇಮ್ರಾನ್ ಪಾಷಾ ಸೇರಿ 22 ಜನರನ್ನು ಪೊಲೀಸರು ಮುಂಜಾಗ್ರತಾ ಕ್ರಮ ಕೈಗೊಂಡು ಬಂಧಿಸಿದ್ದರು.
ಬಂಧಿತ 22 ಮಂದಿಯ ಪೈಕಿ ಒಬ್ಬನಿಗೆ ಕೊರೊನಾ ಪಾಸಿಟಿವ್ ಬಂದಿದೆ. ಹೀಗಾಗಿ ತಕ್ಷಣವೇ ಆತನನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ಕೋವಿಡ್-19 ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಆರೋಪಿಗಳನ್ನ ಕೊರೊನಾ ವೈರಸ್ ಪರೀಕ್ಷೆಗೆ ಕರೆದೊಯ್ದಿದ್ದ ಜೆಜೆಆರ್ ನಗರದ ಪೊಲೀಸರಲ್ಲಿ ಆತಂಕ ಶುರುವಾಗಿದೆ. ಒಟ್ಟು 12 ಜನ ಪೊಲೀಸರು ಆರೋಪಿಗಳನ್ನು ಕೊರೊನಾ ಟೆಸ್ಟ್ ಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದಿದ್ದರು. ಹೀಗಾಗಿ ಎಲ್ಲ 12 ಪೊಲೀಸ್ ಸಿಬ್ಬಂದಿಗೂ ಮತ್ತೊಮ್ಮೆ ಟೆಸ್ಟ್ ಮಾಡಿಸಲು ಇಲಾಖೆಯು ನಿರ್ಧಾರ ಕೈಗೊಂಡಿದೆ.